ಬೆಂಗಳೂರು: ನೆಲಮಂಗಲ ಮತ್ತು ಮತ್ತೀಕೆರೆಯಲ್ಲಿರುವ ಯೆಲ್ಲೋ ಎಕ್ಸ್ಪ್ರೆಸ್ ಲಾಜಿಸ್ಟಿಕ್ ಕಂಪನಿ ಮೇಲೆ ಸಿಐಡಿ ದಾಳಿ ನಡೆಸಿದೆ.
ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಈ ಹಿಂದೆ ದಾಳಿ ನಡೆಸಿತ್ತು. ನಂತರ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿತ್ತು. ಈಗ ದಾಳಿ ನಡೆಸಿರುವ ಸಿಐಡಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಯೆಲ್ಲೋ ಎಕ್ಸ್ಪ್ರೆಸ್ ಸ್ಪೆಷಲ್ ಎಡಿಷನ್ ಹೆಸರಿನ ಕಂಪನಿ, ಸಾರ್ವಜನಿಕರಿಗೆ ಮೋಸ ಮಾಡುತ್ತಿದೆ ಎಂಬ ಆರೋಪ ಹೆಚ್ಚಾದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಹಿಂದಿನ ಉಪವಿಭಾಗಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿತ್ತು. ಆದರೆ ಕಾರ್ಯಾಚರಣೆ ನಡೆಸಿ ತಿಂಗಳಾದರೂ ಮಾಹಿತಿ ನೀಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದನ್ನು ಸಾರ್ವಜನಿಕರು ಪ್ರಶ್ನಿಸಿದ್ದರು.
ಯೆಲ್ಲೋ ಎಕ್ಸ್ಪ್ರೆಸ್ ಇಂಡಿಯಾಪ್ರೈವೇಟ್ ಲಿಮಿಟೆಡ್ ಕಂಪನಿ 2018ರ ಅಕ್ಟೋಬರ್ 20 ರಂದು ಅಸ್ತಿತ್ವಕ್ಕೆ ಬಂದಿದೆ. ಯಶವಂತಪುರ ಬಳಿಯ ಮತ್ತೀಕೆರೆ ವಿಳಾಸದಲ್ಲಿ ಸ್ಥಾಪನೆಯಾಗಿದೆ. ಇದರಲ್ಲಿ ರೆಮೀತ್ಮಲ್ಹೋತ್ರಾ, ಜೋಜು ಥಾಮಸ್, ನಾಡಿ ನಾಯರ್, ಲಕ್ಷ್ಮಿ ಸುರೇಖಾ, ಆಯಿಷಾ ಸಿದ್ಧಿಕಿ, ಮನು ಕುಟ್ಟಾ, ರಶ್ಮಿ ಮಾಚಯ್ಯ ಅವರ ಹೆಸರುಗಳು ಕೇಳಿ ಬಂದಿದೆ.
ಏನಿದು ಯೆಲ್ಲೋ ಎಕ್ಸ್ಪ್ರೆಸ್?
ಪಟ್ಟಣದ ಜಕ್ಕಸಂದ್ರ ರಸ್ತೆಯಲ್ಲಿ ಪ್ರಾರಂಭವಾಗಿರುವ ಈ ಕಂಪನಿಗೆ ರಾಜ್ಯದೆಲ್ಲೆಡೆ ಹೂಡಿಕೆದಾರರಿದ್ದಾರೆ. ಈ ಕಂಪನಿಯು ಕಾರುಗಳನ್ನು ಗುತ್ತಿಗೆಯೋಜನೆಯ ಮೂಲಕ 2.50 ಲಕ್ಷ ರೂ. ಡೌನ್ಪೇಮೆಂಟ್ ಪಾವತಿಸಿಕೊಂಡು, ಹೂಡಿಕೆದಾರರ ಹೆಸರಿನಲ್ಲಿ ಕಾರನ್ನು ನೋಂದಾಯಿಸುತ್ತದೆ. ಅಲ್ಲದೆ 4 ವರ್ಷದವರೆಗೆ ಹೂಡಿಕೆದಾರನಿಗೆ ಪ್ರತಿ ತಿಂಗಳು 10 ಸಾವಿರ, ಗುತ್ತಿಗೆ ಮುಗಿದ ನಂತರ 2.50 ಲಕ್ಷ ವಾಪಸ್ ನೀಡುತ್ತದೆ. ಈಗಾಗಲೇ ಕಂಪನಿಗೆ 2 ಸಾವಿರಕ್ಕೂ ಹೆಚ್ಚು ಜನರು ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿತ್ತು.
ಕ್ಯಾಬ್ ಹೂಡಿಕೆದಾರರ ಹೆಸರಿಗೆ ಬದಲಾಗಿ ಸಂಸ್ಥೆಯ ಮಾಲೀಕರ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ದೂರು ಬಂದಿತ್ತು. ಕಂಪನಿ ಸುಮಾರು 40 ರಿಂದ 60 ಕೋಟಿ ಸಂಗ್ರಹಿಸಿದೆ. ಒಟ್ಟು 240 ಕಾರುಗಳನ್ನು ಖರೀದಿಸಿದ್ದು, 63 ಕ್ಯಾಬ್ಗಳನ್ನು ಊಬರ್ ಗೆ ಬಾಡಿಗೆಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಅಶೋಕ್ ಹೇಳಿದ್ದೇನು?
ಸುದ್ದಿಗೋಷ್ಠಿ ವೇಳೆ ಮಾತನಾಡಿದ್ದ ಕಂದಾಯ ಸಚಿವ ಆರ್ ಅಶೋಕ್, ಇದೂ ಕೂಡ ಸಾರ್ವಜನಿಕರಿಗೆ ಆಮಿಷ ತೋರಿ ವಂಚಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಸಿಐಡಿ ತನಿಖೆಗೆ ವಹಿಸಲಾಗಿದೆ. ಇದೇ ರೀತಿ ರಾಜ್ಯದ ವಿವಿಧೆಡೆ ಸಾರ್ವಜನಿಕರಿಗೆ ಆಮಿಷತೋರಿ ವಂಚಿಸುವ ಜಾಲವನ್ನು ಮಟ್ಟ ಹಾಕಲು ಕಂದಾಯ ಇಲಾಖೆ ಉದ್ದೇಶಿಸಿದ್ದು, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು.