ಚಿಕ್ಕಮಗಳೂರು: ರಾಜ್ಯದ ಕೆಲವೆಡೆ ಗೋ ಬ್ಯಾಕ್ ಟ್ರಂಪ್ ಚಳುವಳಿ ನಡೆಯುತ್ತಿರುವ ಹಿನ್ನೆಲೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಗೋ ಬ್ಯಾಕ್ ಅನ್ನುವವರಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಚಿಕ್ಕಮಗಳೂರು ಉತ್ಸವದ ಅಂಗವಾಗಿ ನಡೆಸಿದ ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಅವರು, ಹುಟ್ಟುವಾಗಲೇ ದ್ವೇಷ ಹೊತ್ತುಕೊಂಡು ಬಂದವರು ಈ ರೀತಿ ವಿರೋಧ ಮಾಡುತ್ತಾರೆ. ಅವರಿಗೆ ಏಕೆ ತಲೆಕೆಡಿಸಿಕೊಳ್ಳಬೇಕು. ಆನೆ ಹೋಗುತ್ತಿರುತ್ತದೆ ಡ್ಯಾಶ್, ಡ್ಯಾಶ್, ಡ್ಯಾಶ್ ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ರವಿ ಕ್ಯಾಸಿನೋ ಆಡಿರಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಸಿದ್ದರಾಮಯ್ಯಗೆ 70 ವರ್ಷ ಕ್ರಾಸ್ ಆಗಿದೆ. ಅವರು ದೊಡ್ಡವರು. ಯಾರ್ಯಾರು ಮೂರು ಮೂರು ದಿನ ಹೊರಗೆ ಬರುತ್ತಿರಲಿಲ್ಲ ಎಂದು ಅವರು ಅವಲೋಕನ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.
ಯಾರ್ಯಾರ ಫ್ರೆಂಡ್ಸ್ ಸರ್ಕಲ್ ಹೇಗಿದೆ. ತಟ್ಟೋಕೆ ಕೂತ್ರೆ ಮೂರು ದಿನ ಹೊರಗೆ ಬರದೇ ಇದ್ದೋರು ಯಾರು ಎಂದು ಸಿದ್ದರಾಮಯ್ಯ ಅವಲೋಕನ ಮಾಡಿಕೊಳ್ಳಲಿ. ಅವಲೋಕನ ಮಾಡಿಕೊಂಡಾಗ ಆರೋಪ ಮಾಡುವವರು ಎಷ್ಟು ಸಾಚಾ ಎಂದು ಗೊತ್ತಾಗುತ್ತೆ ಎಂದು ಸಿದ್ದು ವಿರುದ್ಧ ಸಚಿವ ಸಿ.ಟಿ.ರವಿ ಕಿಡಿಕಾರಿದರು.