ಚಿಕ್ಕಬಳ್ಳಾಪುರ: ಬಡತನ ಎಂಬುದು ಮನುಷ್ಯನ ಕೈಯಲ್ಲಿ ಏನ್ ಬೇಕಾದರೂ ಮಾಡಿಸುತ್ತದೆ ಎಂಬುವುದಕ್ಕೆ ಈ ಮಹಿಳೆಯರೇ ಸಾಕ್ಷಿ. ಮೂರು ಹೊತ್ತು ನೆಮ್ಮದಿಯಾಗಿ ಊಟ ಮಾಡಲು ಮೂವರು ಮಹಿಳೆಯರು ತೆಪ್ಪದಲ್ಲಿ ಕೆರೆಗೆ ಸಾಗಿ ಮೀನು ಹಿಡಿಯುತ್ತಿದ್ದಾರೆ.
ಈ ಸಾಹಸಿ ಮಹಿಳೆಯರು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೆಂಕಟಾಪುರ ಕೆರೆಯಲ್ಲಿ. ಇಲ್ಲಿನ ಆಂಧ್ರ ಮೂಲದ ಈ ಮಹಿಳೆಯರು ಸಾಹಸ ಎಲ್ಲರೂ ಹುಬ್ಬೇರುವಂತೆ ಮಾಡಿದೆ.
ಆ ಮಹಿಳೆಯರು ಗಂಡ-ಮಕ್ಕಳು ಸಂಸಾರ ಎಲ್ಲವನ್ನು ಕಟ್ಟಿಕೊಂಡು ತೆಪ್ಪ ಏರಿದ್ದಾರೆ ಅಂದರೆ ಸಾಕು ಹೊಟ್ಟೆ ತುಂಬುವವರೆಗೂ ಭೂಮಿ ಮೇಲೆ ಬರಲ್ಲ. ಪ್ರತಿ ದಿನ ಬದುಕಿನ ಬಂಡಿ ಸಾಗಿಸಲು ಇರುವ ಹಳೆ ತೆಪ್ಪದಲ್ಲೇ ಕೆರೆಗೆ ಸಾಗುವ ಮಹಿಳೆಯರು ಭರ್ಜರಿ ಮೀನುಗಳನ್ನು ಹಿಡಿದು ಮರಳಿ ದಡಕ್ಕೆ ವಾಪಸಾಗುತ್ತಾರೆ. ಪ್ರತಿದಿನ ಕೆರೆಗೆ ಸಾಗಿ ಮೀನು ತರುವ ಮಹಿಳೆಯರ ಕಾಯಕ ಕಂಡ ಜನ ಮಹಿಳೆಯರ ಸಾಹಸ ಕಂಡು ಮೆಚ್ಚುಗೆ ಜೊತೆ ಆಶ್ಚರ್ಯ ಮತ್ತು ಆತಂಕವನ್ನೂ ವ್ಯಕ್ತಪಡಿಸ್ತಾರೆ.
ಬದುಕಿನ ಬಂಡಿ ಸಾಗಿಸಲು ಗಂಡ ಮಕ್ಕಳು ಕುಟುಂಬ ಸಮೇತ ಚಿಕ್ಕಬಳ್ಳಾಪುರ ಜಿಲ್ಲೆಯತ್ತ ಬಂದಿರೋ ಈ ಮಹಿಳೆಯರು ಪ್ರತಿದಿನ ಒಂದಲ್ಲ ಒಂದು ಕೆರೆಯಲ್ಲಿ ಮೀನು ಹಿಡಿಯುವ ಕಾಯಕ ಮಾಡುತ್ತಾರೆ. ಮೀನು ಸಾಕಿರುವ ಗುತ್ತಿಗೆದಾರನಿಗೆ ತಂದ ಮೀನು ಕೊಟ್ಟು ತಲಾ ಕೆಜಿಗೆ 20 ರೂಪಾಯಿ ಪಡೆಯುತ್ತಾರೆ. ಹೀಗೆ ಬಂದ ಹಣದಿಂದಲೇ ತಮ್ಮ ಜೀವನ ಸಾಗಿಸುತ್ತಾ ತೆಪ್ಪದಲ್ಲೊಂದು ಬದುಕು ಕಂಡುಕೊಂಡಿದ್ದಾರೆ.
ಒಟ್ಟಿನಲ್ಲಿ ಮಹಿಳೆಯರು ಯಾರಿಗೇನು ಕಮ್ಮಿಯಿಲ್ಲ ಬಾಹ್ಯಾಕಾಶಕ್ಕೆ ಹಾರಿದವರು ಉಂಟು, ಆಗಸದಲ್ಲಿ ವಿಮಾನ ಹಾರಿಸದವರು ಉಂಟು ಆದರೆ ಕಡುಬಡತನದ ಈ ಮಹಿಳೆಯರು ತಮ್ಮ ಬದುಕಿನ ಬಂಡಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ತೆಪ್ಪದಲ್ಲೊಂದು ಬದುಕು ಕಟ್ಟಿಕೊಂಡಿದ್ದಾರೆ. ಇವರ ಬದುಕು ಸಾಹಸ ಹಲವು ಮಂದಿಗೆ ಸ್ಪೂರ್ತಿಯಾಗಲಿದೆ.