ಮಾಜಿ ಬಿಗ್ ಬಾಸ್ ಸ್ಪರ್ಧಿ, ಗಾಯಕಿ ಹಾಗೂ ನಟಿಯೂ ಆಗಿರುವ ಸಪ್ನಾ ಚೌಧರಿ (Sapna Chaudhary) ಕೊನೆಗೂ ಲಖನೌ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ (Surrender). ವಂಚನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಸಪ್ನಾಗೆ ನ್ಯಾಯಾಲಯವು ಬಂಧನ ವಾರೆಂಟ್ (Warrant) ಜಾರಿ ಮಾಡಿತ್ತು. ಹಾಗಾಗಿ ಸಪ್ನಾಗಾಗಿ ಪೊಲೀಸರು ಬಲೆ ಬೀಸಿದ್ದರು. ಹುಡುಕಾಟ ಕೂಡ ನಡೆದಿತ್ತು.
2018ರಲ್ಲಿ ಇವೆಂಟ್ ಮಾಡಿಕೊಡಲು ಒಪ್ಪಿಕೊಂಡಿದ್ದ ಸಪ್ನಾ, ಗಾಯನ ಮತ್ತು ನೃತ್ಯಕ್ಕಾಗಿ ಲಕ್ಷಾಂತರ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. ಆದರೆ, ಆ ಕಾರ್ಯಕ್ರಮವನ್ನು ಅವರಿಂದ ಮಾಡಿಕೊಡಲು ಸಾಧ್ಯವಾಗಲಿಲ್ಲ. ಅಲ್ಲದೇ, ಪಡೆದಿದ್ದ ಸಂಭಾವನೆಯನ್ನೂ ಅವರು ಹಿಂದಿರುಗಿಸಲಿಲ್ಲ. ಕೊನೆ ಕ್ಷಣದಲ್ಲಿ ಕಾರ್ಯಕ್ರಮವನ್ನು ಮಾಡದೇ ಇರುವ ಕಾರಣಕ್ಕಾಗಿ ಆಯೋಜಕರಿಗೆ ಸಾಕಷ್ಟು ನಷ್ಟವಾಗಿತ್ತು. ಹಾಗಾಗಿ ತಮಗೆ ವಂಚನೆ (Cheating) ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದನ್ನೂ ಓದಿ:ಅನುಷ್ಕಾಗೆ ಕೈಕೊಟ್ಟು ಬಾಲಿವುಡ್ ಬೆಡಗಿಗೆ ಮನಸ್ಸು ಕೊಟ್ಟ ಪ್ರಭಾಸ್
ಈ ಹಿಂದಿನ ವಿಚಾರಣೆಗಳಿಗೆ ಸಪ್ನ ಹಾಜರಾಗದೇ ಇರುವ ಕಾರಣಕ್ಕಾಗಿ ಲಖನೌನ (Lucknow) ಮ್ಯಾಜಿಸ್ಟ್ರೇಟ್ ಕೋರ್ಟ್ (Court) ಬಂಧನ (Arrest) ವಾರೆಂಟ್ ಜಾರಿ ಮಾಡಿತ್ತು. ನಿನ್ನೆ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಿ, ತಮ್ಮಿಂದ ಯಾವುದೇ ತಪ್ಪು ಆಗಿಲ್ಲ, ತಾವು ವಂಚನೆಯನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ಜಾರಿ ಆಗಿರುವ ಬಂಧನ ವಾರೆಂಟ್ ಅನ್ನು ರದ್ದು ಮಾಡುವಂತೆ ಅವರು ಮನವಿಯನ್ನೂ ಮಾಡಿಕೊಂಡಿದ್ದಾರೆ.
ಸಪ್ನಾ ಹೇಳಿಕೆಯನ್ನು ಆಲಿಸಿದ ಕೋರ್ಟ್ ಸದ್ಯ ಅರೆಸ್ಟ್ ವಾರೆಂಟ್ ರದ್ದು ಮಾಡಿದ್ದು ಮತ್ತೆ ಸೆಪ್ಟೆಂಬರ್ 30ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. 14 ಅಕ್ಟೋಬರ್ 2018ರಂದು ಸಪ್ನಾ ವಿರುದ್ಧ ದೂರು ದಾಖಲಾಗಿತ್ತು. ಅಲ್ಲಿಂದ ಈವರೆಗೂ ಸಪ್ನಾ ಕೋರ್ಟಿಗೆ ಹಾಜರಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.