ಬೆಂಗಳೂರು: ಸಿಇಟಿ ರ್ಯಾಂಕ್ ರದ್ದುಪಡಿಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಇಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ತಮ್ಮ ನಿವಾಸದಲ್ಲಿ ಕೆಇಎ ಅಧಿಕಾರಿಗಳು, ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜೊತೆ ಸಭೆ ನಡೆಸಿ ಚರ್ಚೆ ನಡೆಸಿದರು. ಸಭೆಯಲ್ಲಿ ಏಕ ಸದಸ್ಯ ಪೀಠದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಯ್ತು. ಇದನ್ನೂ ಓದಿ: ಹೈಕೋರ್ಟ್ನಿಂದ ಸಿಇಟಿ ರ್ಯಾಂಕ್ ರದ್ದು- ಮೇಲ್ಮನವಿ ಸಲ್ಲಿಸುತ್ತಾ ಸರ್ಕಾರ?
ಸಭೆ ಬಳಿಕ ಮಾತನಾಡಿದ ಸಚಿವ ಅಶ್ವಥ್ ನಾರಾಯಣ, ಎಂದೂ ಆಗದ ರೀತಿ ಈ ಬಾರಿ ಸವಾಲು ನಾವು ನೋಡ್ತಿದ್ದೇವೆ. 25 ಸಾವಿರ ರಿಪೀಟರ್ಸ್ ವಿದ್ಯಾರ್ಥಿಗಳು ಈ ಬಾರಿ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಹೊಸ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯ ಆಗದಂತೆ ನಾವು ನಿರ್ಧಾರ ಮಾಡಿದ್ವಿ. ಆದರೆ ಹೈಕೋರ್ಟ್ ರ್ಯಾಂಕ್ ರದ್ದು ಮಾಡಿದೆ. ಹೈಕೋರ್ಟ್ ಆದೇಶದ ತೀರ್ಪಿನಿಂದ 1.5 ಲಕ್ಷ ಹೊಸ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಹೀಗಾಗಿ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನ ಮಾಡಲಾಗಿದೆ ಎಂದರು. ಇದನ್ನೂ ಓದಿ: ಸಮವಸ್ತ್ರ ನಿರ್ಧಾರ ಶಿಕ್ಷಣ ಹಕ್ಕು ಉಲ್ಲಂಘನೆಯಲ್ಲ – ಹಿಜಬ್ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅಭಿಪ್ರಾಯ
ಸಮಸ್ಯೆ ಬಗೆಹರಿಸಲು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಇಂದು ಅಥವಾ ನಾಳೆ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡು, ದ್ವಿ-ಸದಸ್ಯ ಪೀಠಕ್ಕೆ ಹೋಗುತ್ತೇವೆ. ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇವೆ. ಯಾರಿಗೂ ಅನ್ಯಾಯ ಆಗದಂತೆ ಕ್ರಮಕ್ಕೆ ಮುಂದಾಗುತ್ತೇವೆ. ಎಲ್ಲವು ಸಮಯದ ಒಳಗೆ ಮುಗಿಸುತ್ತೇವೆ. ವಿದ್ಯಾರ್ಥಿಗಳಿಗೆ ಒಳ್ಳೆಯದು ಮಾಡಲು ನಾವು ಸಿದ್ದರಿದ್ದೇವೆ. ರಿಪೀಟರ್ಸ್ ವಿದ್ಯಾರ್ಥಿಗಳ ಮೇಲೆ ನಮಗೇನು ಕೋಪ ಇಲ್ಲ. ಟೆಕ್ನಕಲ್ ವಿಷಯದಿಂದ ಹೊಸ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡಲು ಕ್ರಮ ತಗೋತೀವಿ ಅಂತ ತಿಳಿಸಿದರು.