ಇಂದು ಪುನೀತ್ ರಾಜ್ ಕುಮಾರ್ (Puneeth RajKumar) ಇಲ್ಲದ ಅವರ ಎರಡನೇ ವರ್ಷದ ಹುಟ್ಟು ಹಬ್ಬವನ್ನು (Birthday) ಆಚರಿಸಲಾಗುತ್ತಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಪುನೀತ್ ಅಭಿಮಾನಿಗಳು ಅಪ್ಪು ಸಮಾಧಿಗೆ ಬಂದು ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕಂಠೀರವ ಸ್ಟುಡಿಯೋಗೆ ಬಂದಿದ್ದಾರೆ ಅಪ್ಪು (Appu) ಅಭಿಮಾನಿಗಳು. ಈ ಸಂದರ್ಭದಲ್ಲಿ ಸಹೋದರನನ್ನು ನೆನಪಿಸಿಕೊಂಡು ನಟ ಶಿವರಾಜ್ ಕುಮಾರ್ (Shivraj Kumar) ಭಾವುಕವಾಗಿ ಪತ್ರ ಬರೆದಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗೋದನ್ನ ಆವಾಗ್ಲೇ ಹೇಳ್ತಾ ಇತ್ತು. ನೀನು ನಕ್ಕರೆ ಎಲ್ರು ನಗ್ತಾ ಇದ್ರು. ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಾ ಇದ್ರು, ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ರಾ ಇದ್ರು, ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು ಹೆಮ್ಮರವಾಗಿ, ಕೋಟ್ಯಾಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ. ನಿನ್ನನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವುದೇ ಆಗಿದ್ರೂ ನಿನ್ನ ಹೆಸರಿನಲ್ಲಿ ಪಟಾಕಿಗಳನ್ನು ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದೀನಿ, ನೀನು ಹುಟ್ಟಿದ್ದೇ ಒಂದು ಉತ್ಸವ. ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ. ನಿನ್ನ ನೆನಪುಗಳು ಎಂದಿಗೂ ಅಮರ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು’ ಎಂದು ಬರೆದುಕೊಂಡಿದ್ದಾರೆ ಶಿವಣ್ಣ.
ರಾಜ್ಯದ ನಾನಾ ಕಡೆಗಳಲ್ಲಿ ಅಪ್ಪು ಪುತ್ಥಳಿ ಅನಾವರಣ, ಅನ್ನ ಸಂತರ್ಪಣೆ, ಅನಾಥಾಶ್ರಮದಲ್ಲಿ ಹುಟ್ಟು ಹಬ್ಬ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಧಾರವಾಡದಲ್ಲಿ ಅಪ್ಪು ಹೆಸರಿನಲ್ಲೇ ಚಂದ್ರಶೇಖರ್ ಮಾಡಲಗೇರಿ ಮತ್ತು ತಂಡ ಚಿತ್ರೋತ್ಸವವನ್ನು ಆಯೋಜನೆ ಮಾಡಲಾಗಿದೆ. ಮೂರು ದಿನಗಳ ಕಾಲ ಅಪ್ಪು ಹೆಸರಿನಲ್ಲೇ ಈ ಚಿತ್ರೋತ್ಸವ ನಡೆಯಲಿದೆ. ಅಪ್ಪು ಹೆಸರಿನಲ್ಲಿ ಪ್ರಶಸ್ತಿಗಳನ್ನೂ ನೀಡಲಾಗುತ್ತಿದೆ. ಇದನ್ನೂ ಓದಿ: ನಟ ಜಗ್ಗೇಶ್ ಹುಟ್ಟು ಹಬ್ಬಕ್ಕೆ ಡಬಲ್ ಧಮಾಕಾ
ಬೆಂಗಳೂರಿನ ಅನೇಕ ಕಡೆ ಇಂದು ಅಪ್ಪು ಹೆಸರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೇ, ಪುನೀತ್ ಅವರ ಹುಟ್ಟು ಹಬ್ಬದ ದಿನದಂದೆ ಆರ್.ಚಂದ್ರು ನಿರ್ದೇಶನದ ಉಪೇಂದ್ರ, ಸುದೀಪ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಕಬ್ಜ ಚಿತ್ರ ರಿಲೀಸ್ ಆಗಿದೆ. ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲೂ ಅಪ್ಪು ಕಟೌಟ್ ಹಾಕಿದೆ ಚಿತ್ರತಂಡ.