ಬೆಂಗಳೂರು: ರಾಜ್ಯ ರಾಜಕೀಯ ಕ್ಷಿಪ್ರ ಬೆಳವಣಿಗೆಗಳ ನಡುವೆಯೇ ಇಂದು ಸಿಎಂ ಅವರು ವಿಶ್ವಾಸಮತಯಾಚನೆ ಸಿದ್ಧ ಎಂದಿರುವ ಪರಿಣಾಮ ಬಿಜೆಪಿ ಶಾಸಕರು ರೆಸಾರ್ಟಿಗೆ ಶಿಫ್ಟ್ ಆಗುತ್ತಿದ್ದಾರೆ.
ಬೆಂಗಳೂರು ಅಂತರಾಷ್ಟ್ರಿಯ ನಿಲ್ದಾಣದ ಬಳಿ ಇರುವ ಐಷಾರಾಮಿ ದಿ ರಮಡ ರೆಸಾರ್ಟಿಗೆ ಎರಡು ಬಸ್ಸಿನಲ್ಲಿ ಬಿಜೆಪಿ ಶಾಸಕರು ತೆರಳಲಿದ್ದಾರೆ.
ಇತ್ತ ಕಾಂಗ್ರೆಸ್ ಶಾಸಕರು ಕೂಡ ದೇವನಹಳ್ಳಿ ಬಳಿಯ ಕ್ಲಾರ್ಕ್ ಎಕ್ಸಾರ್ಟಿಕಾ ರೆಸಾರ್ಟಿಗೆ ಶಿಫ್ಟ್ ಆಗುತ್ತಾರೆ ಎನ್ನಲಾಗಿತ್ತು. ಆದರೆ 70 ಶಾಸಕರಿಗೆ ರೆಸಾರ್ಟಿನಲ್ಲಿ ಕೊಠಡಿಗಳು ಸಿಗದ ಹಿನ್ನೆಲೆಯಲ್ಲಿ ಮತ್ತೊಂದು ರೆಸಾರ್ಟ್ ನೋಡಲು ಗೃಹ ಸಚಿವ ಎಂಬಿ ಪಾಟೀಲ್ ಅವರಿಗೆ ಜವಾಬ್ದಾರಿಯನ್ನು ನೀಡಲಾಗಿದೆ.
ಈಗಲ್ಟನ್ ರೆಸಾರ್ಟಿನಲ್ಲಿ ಕೊಠಡಿಗಳ ನವೀಕರಣ ಆಗುತ್ತಿರುವ ಹಿನ್ನೆಲೆಯಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಆಗಿದ್ದು, ವೀಕೆಂಡ್ ಆಗಿರುವುದರಿಂದ 70 ಕೊಠಡಿಗಳು ಲಭ್ಯವಿಲ್ಲ ಎಂದು ಕ್ಲಾರ್ಕ್ ಎಕ್ಸಾರ್ಟಿಕಾ ರೆಸಾರ್ಟ್ ಸಿಬ್ಬಂದಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಎಲ್ಲಾ ಶಾಸಕರನ್ನು ಒಟ್ಟಿಗೆ ಇರುವಂತೆ ಸೂಚನೆ ನೀಡಿರುವುದರಿಂದ ಸದ್ಯ ಬೇರೊಂದು ರೆಸಾರ್ಟಿಗಾಗಿ ಹುಡುಕಾಟ ನಡೆಸಲಾಗಿದೆ. ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಅವರ ನೇತೃತ್ವದಲ್ಲೇ ಕಾಂಗ್ರೆಸ್ ಶಾಸಕರು ರೆಸಾರ್ಟಿಗೆ ತೆರಳಲಿದ್ದಾರೆ.
ಇತ್ತ ಕಳೆದ 3 ದಿನಗಳಿಂದ ನಂದಿ ಬೆಟ್ಟದ ಬಳಿ ಇರುವ ರೆಸಾರ್ಟಿನಲ್ಲಿ ಜೆಡಿಎಸ್ ಶಾಸಕರು ತಂಗಿದ್ದಾರೆ. ಸೋಮವಾರ ಮಧ್ಯಾಹ್ನ 12 ಗಂಟೆಗೆ ವಿಧಾನಸಭಾ ಕಲಾಪವನ್ನು ಮುಂದೂಡಿರುವುದರಿಂದ ಅಲ್ಲಿಯವರೆಗೂ ರೆಸಾರ್ಟಿನಲ್ಲಿಯೇ ಶಾಸಕರು ಇರಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈಗಾಗಲೇ ಅತೃಪ್ತ ಶಾಸಕರು ಮುಂಬೈ ಹೋಟೆಲಿನಲ್ಲಿ ತಂಗಿರುವುದರಿಂದ ಕರ್ನಾಟಕ ಎಲ್ಲಾ ಶಾಸಕರು ಬಹುತೇಕ ರೆಸಾರ್ಟಿನಲ್ಲೇ ಮೂರು ದಿನಗಳ ಕಾಲ ಉಳಿಯಲಿದ್ದಾರೆ. ಈ ಎಲ್ಲಾ ರೆಸಾರ್ಟ್ ಗಳಲ್ಲಿ ಸ್ವಿಮ್ಮಿಂಗ್ ಪೂಲ್, ಸ್ಪಾ, ಸಭಾಂಗಣ ಸೇರಿದಂತೆ ಎಲ್ಲಾ ಐಷಾರಾಮಿ ವ್ಯವಸ್ಥೆಗಳು ಇರಲಿದೆ.
ಜುಲೈ 7 ರಂದು ಬಿಡದಿಯ ಈಗಲ್ ಟನ್ ರೆಸಾರ್ಟ್ ಜನರಲ್ ಮ್ಯಾನೇಜರ್ ಮ್ಯಾಥ್ಯೂ ಸ್ಪಷ್ಟನೆ ನೀಡಿ, ನಮ್ಮಲ್ಲಿ ಯಾವುದೇ ರೂಂಗಳು ಖಾಲಿ ಇಲ್ಲ. ಕಾಂಗ್ರೆಸ್ ಶಾಸಕರು ಬಂದರೂ ಸಹ ನಮ್ಮಲ್ಲಿ ಯಾವುದೇ ರೂಂ ಖಾಲಿ ಇಲ್ಲ. ಎಲ್ಲಾ ಕೊಠಡಿಗಳಲ್ಲಿ ತರಬೇತಿ ಪಡೆಯುತ್ತಿರುವ ಜೂನಿಯರ್ ಕ್ರಿಕೆಟ್ ಆಟಗಾರರಿದ್ದಾರೆ. ಉಳಿದ ಶೇ.60 ರಷ್ಟು ಭಾಗ ರೆಸಾರ್ಟ್ ನವೀಕರಣ ಕಾರ್ಯ ನಡೆಯುತ್ತಿದೆ. ಇಲ್ಲಿಯವರೆಗೂ ರೂಂ ಬುಕ್ಕಿಂಗ್ ವಿಚಾರದಲ್ಲಿ ನಮಗೆ ಕರೆ ಬಂದಿಲ್ಲ. ಬಂದರೂ ಸಹ ರೂಂಗಳು ಸಿಗುವುದಿಲ್ಲ. ಇನ್ನು 10 ದಿನಗಳ ಕಾಲ ನಮ್ಮಲ್ಲಿ ಯಾರೇ ಬಂದರೂ ರೂಂ ಸಿಗುವುದಿಲ್ಲ ಎಂದು ತಿಳಿಸಿದ್ದರು.