ಅಗ್ನಿಸಾಕ್ಷಿ, ಬಿಗ್ ಬಾಸ್ (Bigg Boss Kannada) ಮೂಲಕ ಮೋಡಿ ಮಾಡಿದ್ದ ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ (Vaishnavi gOwda) ಅವರು ಇದೀಗ ಅರ್ಧಕ್ಕೆ ನಿಂತು ಹೋದ ಮದುವೆ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಖಾಸಗಿ ಜೀವನದ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.
ಕಿರುತೆರೆಯ ಹೆಸರಾಂತ ನಟಿ ವೈಷ್ಣವಿ ಸದ್ಯ ‘ಸೀತಾರಾಮ’ (Seetharama) ಸೀರಿಯಲ್ಗೆ ನಾಯಕಿಯಾಗಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮುರಿದ ಮದುವೆ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ವಿದ್ಯಾಶಂಕರ್ (VidyaShankar) ಜೊತೆ ಕುಟುಂಬದ ಮುಂದೆ ನಟಿ ಹಾರ ಬದಲಿಸಿಕೊಂಡಿದ್ದರು. ಈ ಕುರಿತ ಫೋಟೋ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ನಂತರ ವಿದ್ಯಾಶಂಕರ್ ಕುರಿತಾದ ಆಡಿಯೋವೊಂದು ವೈರಲ್ ಆಗಿತ್ತು. ಆ ನಂತರ ವೈಷ್ಣವಿ ಅವರು ವಿದ್ಯಾಶಂಕರ್ ಜೊತೆ ಸಂಬಂಧ ಮುಂದುವರೆಸೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಈ ಘಟನೆ ನಡೆದು 8 ತಿಂಗಳ ಬಳಿಕ ನಟಿ ವೈಷ್ಣವಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದು ನನ್ನ ತಾಯಿಯಿಂದ ಬಂದ ಸಂಬಂಧವಾಗಿತ್ತು. ಕೆಲ ದಿನಗಳ ನಂತರ ಸಂದರ್ಭ ಬದಲಾಯ್ತು, ನಾವು ಸಂಬಂಧ ಮುಂದುವರೆಸಲಿಲ್ಲ. ಆ ಘಟನೆ ನಮ್ಮ ಹಿಂದೆ ನಡೆದಿದ್ದಾಗಿತ್ತು. ಆದರೆ ಆ ಮೇಲೆ ನಡೆದಿದ್ದೆಲ್ಲ ನಾವು ನಿರೀಕ್ಷೆಯೇ ಮಾಡಿರಲಿಲ್ಲ. ಕೆಲ ದಿನಗಳ ಕಾಲ ಕ್ಯಾಮೆರಾಗಳು ನಮ್ಮ ಮನೆ ಮುಂದೆ ಇರುತ್ತಿದ್ದದ್ದು ಇಂದು ಕೂಡ ನನಗೆ ನೆನಪಿದೆ. ಅಂದಿನ ಆ ಸಮಯ ಕುಟುಂಬಕ್ಕೆ ತುಂಬ ಕಷ್ಟವಾಗಿತ್ತು ಎಂದು ನಟಿ ವೈಷ್ಣವಿ ಹೇಳಿದ್ದಾರೆ. ಇದನ್ನೂ ಓದಿ:ಕತಾರ್ ಕನ್ನಡಿಗರನ್ನು ರಂಜಿಸಿದ ‘ಚೌಕಬಾರ’ ಸಿನಿಮಾ
ನಾನು ಸಾರ್ವಜನಿಕ ಜೀವನದಲ್ಲಿ ಬದುಕುತ್ತಿದ್ದೇನೆ. ಎಲ್ಲರ ಕಣ್ಣು ನನ್ನ ಮೇಲಿರುತ್ತದೆ. ಇದನ್ನು ನನ್ನ ಕುಟುಂಬ ಎದುರಿಸಬೇಕಿತ್ತು. ಆ ಸಮಯದಲ್ಲಿ ನಾನು ನಿಸ್ಸಹಾಯಕಳಾಗಿದ್ದೆ. ಏನಾಗತ್ತೋ ಅದು ಒಳ್ಳೆಯದಕ್ಕೆ ಆಗುವುದು. ನನಗೆ ಇಂದಿಗೂ ಕೂಡ ರಿಲೇಶನ್ಶಿಪ್ನಲ್ಲಿ ನಂಬಿಕೆಯಿದೆ. ಮುಂದೊಂದು ದಿನ ನನಗೂ ಮದುವೆಯಾಗಿ ಕುಟುಂಬ ಇರುತ್ತದೆ ಎಂದು ನಂಬಿದ್ದೇನೆ. ಆ ರೀತಿ ಘಟನೆಗಳು ನನ್ನ ನಂಬಿಕೆಯನ್ನು ಮುರಿಯೋದಿಲ್ಲ ಎಂದು ಪಾಸಿಟಿವ್ ಆಗಿ ನಟಿ ವೈಷ್ಣವಿ ಮಾತನಾಡಿದ್ದಾರೆ.