– ಲೋಕಲ್ ಎಲೆಕ್ಷನ್ ನಲ್ಲಿ ಬಿಎಸ್ವೈಗೆ ಮುಖಭಂಗ
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದ ಪುರಸಭೆಯಲ್ಲಿ ಕಳೆದ ಮೂರು ದಶಕಗಳಿಂದ ಇದ್ದ ಬಿಜೆಪಿ ಅಧಿಕಾರ ಅಂತ್ಯಗೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಯಡಿಯೂರಪ್ಪ ಲೋಕಲ್ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಇಂದು ಪ್ರಕಟಗೊಂಡ ಪುರಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿಗಳು ದಯಾನೀಯ ಸೋಲು ಕಂಡಿದ್ದಾರೆ. ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ. ಬಿಜೆಪಿ ಕೇವಲ 8 ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. ಇಲ್ಲಿ ಪಕ್ಷೇತರರು ಮೂರು ಸ್ಥಾನಗಳಲ್ಲಿ ಗೆದ್ದಿದ್ದಾರೆ.
ಜಿಲ್ಲೆಯಲ್ಲಿ ಚುನಾವಣೆ ನಡೆದ ಐದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಎರಡಲ್ಲಿ ಅಧಿಕಾರ ಹಿಡಿದರೆ ಒಂದರಲ್ಲಿ ಕಾಂಗ್ರೆಸ್, ಇನ್ನು ಎರಡರಲ್ಲಿ ಮೈತ್ರಿಕೂಟ ಅಧಿಕಾರ ಹಿಡಿದಿವೆ. ಇದೂವರೆಗೂ ಕಾಂಗ್ರೆಸ್ ವಶದಲ್ಲಿದ್ದ ಸಾಗರ ಪುರಸಭೆ ಈಗ ಬಿಜೆಪಿ ವಶವಾಗಿದೆ. ಸಾಗರ ನಗರಸಭೆಯ ಒಟ್ಟು ಸ್ಥಾನ 31 ಸ್ಥಾನಗಳಲ್ಲಿ ಬಿಜೆಪಿ 16 ಸ್ಥಾನಗೆದ್ದು, ಸ್ಪಷ್ಟ ಬಹುಮತ ಪಡೆದಿದೆ. ಇಲ್ಲಿ ಕಾಂಗ್ರೆಸ್ 9, ಜೆಡಿಎಸ್ 1 ಹಾಗೂ ಪಕ್ಷೇತರರು 5ಸ್ಥಾನದಲ್ಲಿ ಗೆದ್ದಿದ್ದಾರೆ.
ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿಯ 17 ಸ್ಥಾನಗಳಲ್ಲಿ ಬಿಜೆಪಿ 2, ಜೆಡಿಎಸ್ 3, ಕಾಂಗ್ರೆಸ್ 7, ಪಕ್ಷೇತರರು 5 ಸ್ಥಾನದಲ್ಲಿ ಗೆದ್ದಿದ್ದು, ಮೈತ್ರಿ ಕೂಟ ಅಧಿಕಾರ ಹಿಡಿದಿದೆ.
ಅಧಿಕಾರ ಮೈತ್ರಿಗೆ
ಸೊರಬ ಪಟ್ಟಣ ಪಂಚಾಯ್ತಿಯ 12 ಸ್ಥಾನಗಳಲ್ಲಿ ಬಿಜೆಪಿ 6 ಗೆದ್ದಿದ್ದು, ಒಂದು ಎಂಎಲ್ಎ ಹಾಗೂ ಒಂದು ಎಂಪಿ ಮತ ಪಡೆದು ಬಹುಮತದಿಂದ ಪಂಚಾಯ್ತಿ ಅಧಿಕಾರ ಹಿಡಿದಿದೆ. ಕಾಂಗ್ರೆಸ್ 4, ಜೆಡಿಎಸ್ 1, ಪಕ್ಷೇತರರು 1 ಸ್ಥಾನದಲ್ಲಿ ಗೆದ್ದಿದ್ದಾರೆ. ಹೊಸನಗರ ಪಟ್ಟಣ ಪಂಚಾಯ್ತಿಯ 11 ಸ್ಥಾನಗಳಲ್ಲಿ ಬಿಜೆಪಿ 4ರಲ್ಲಿ ಗೆದ್ದಿದೆ. ಕಾಂಗ್ರೆಸ್ 4, ಜೆಡಿಎಸ್ 3 ಸ್ಥಾನಗಳನ್ನು ಗೆದ್ದಿದ್ದು, ಮೈತ್ರಿ ಕೂಟ ಅಧಿಕಾರ ಹಿಡಿಯಲಿದೆ.