ಬೆಂಗಳೂರು: ಕದ್ದ ಚಿನ್ನಾಭರಣವನ್ನು ಹಂಚಿಕೆ ಮಾಡಿಕೊಳ್ಳುವ ವಿಚಾರಕ್ಕೆ ನಟೋರಿಯಸ್ ರಾಬರ್ ಶೋಯಬ್ ಪಾಷಾನನ್ನು ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಣ್ಣ, ವಸೀಂ, ಅಬ್ರಾನ್, ಸಮೀರ್ ಹಾಗೂ ಚಪ್ಪರ್ ಬಾಬು ಬಂಧಿತ ಆರೋಪಿಗಳು. ಕೊಲೆಯಾದ ಶೋಯಬ್ ಪಾಷಾ ಹಾಗೂ ಬಂಧಿತ ಐವರು ಆರೋಪಿಗಳು ಹಲವು ಪ್ರಕರಣಗಳಲ್ಲಿ ಒಟ್ಟಿಗೆ ಕಳ್ಳತನ, ದರೋಡೆಗಳನ್ನು ಮಾಡಿದ್ದಾರೆ. ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಕದ್ದ ಚಿನ್ನಾಭರಣಗಳನ್ನು ಹಂಚಿಕೆ ಮಾಡುವಾಗ ಕೊಲೆಯಾದ ಶೋಯಬ್ ಪಾಷಾ ಆರೋಪಿಗಳಿಗೆ ಸಮರ್ಪಕವಾಗಿ ಹಂಚದೇ ಮೋಸ ಮಾಡಿದ್ದ.
ಇದೇ ವಿಚಾರಕ್ಕೆ ಹಲವು ಬಾರಿ ಆರೋಪಿಗಳು ಹಾಗೂ ಕೊಲೆಯಾದ ಪಾಷಾ ನಡುವೆ ಗಲಾಟೆ ನಡೆದಿತ್ತು. ಕಳೆದ ಭಾನುವಾರ ಕೊಲೆಯಾದ ಪಾಷಾ ಹಾಗೂ ಬಂಧಿತ ಆರೋಪಿ ರಾಯಣ್ಣ, ವಸೀಂ ಅಂಡ್ ಗ್ಯಾಂಗ್ ನಡುವೆ ಜೋರಾಗಿ ಗಲಾಟೆ ಆಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಮುಂಜಾನೆ ಸಮಯದಲ್ಲಿ ಹಳೆ ಗುಡ್ಡದಲ್ಲಿ ಪಾಷಾನನ್ನು ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು.
ಘಟನೆ ಸಂಬಂಧ ಜೆ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜೆ.ಜೆ. ನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾದ ಶೋಯಬ್ ಪಾಷಾನ ವಿರುದ್ಧ ಪಿಕ್ ಪ್ಯಾಕೆಟ್, ಕಳ್ಳತನ, ದರೋಡೆ, ರಾಬರಿ ಸೇರಿದಂತೆ ಒಟ್ಟು 17 ಪ್ರಕರಣಗಳಿದ್ದು ಹಲವಾರು ಠಾಣೆಗಳಿಗೆ ಬೇಕಿದ್ದ.
ಬಂಧಿತ ಆರೋಪಿಗಳ ವಿರುದ್ಧವು ಕೂಡ ಹಲವು ಪ್ರಕರಣಗಳಿರುವುದು ತನಿಖೆಯ ವೇಳೆ ಬಹಿರಂಗವಾಗಿದೆ. ಜೆ.ಜೆ. ನಗರ ಪೊಲೀಸರು ಆರೋಪಿಗಳ ವಿಚಾರಣೆ ಮುಗಿಸಿದ್ದು, ಈಗ ಆರೋಪಿಗಳನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.