ಬೆಂಗಳೂರು: ಉಪ ಚುನಾವಣಾ ಫಲಿತಾಂಶ ಹೊರ ಬೀಳುವ ಮೊದಲೇ ಕಾಂಗ್ರೆಸ್ ನಾಯಕರ ಗುಪ್ತ್ ಗುಪ್ತ್ ಮೀಟಿಂಗ್ ನಡೆಯುತ್ತಿದ್ದು, ಡಿಸೆಂಬರ್ 11 ಅಥವಾ 12 ರಂದು ಮೂಲ ಕಾಂಗ್ರೆಸ್ಸಿಗರ ದಂಡು ದೆಹಲಿಗೆ ದೌಡಾಯಿಸಲಿದೆ ಎನ್ನಲಾಗಿದೆ.
ಹೈಕಮಾಂಡಿಗೆ ಫಲಿತಾಂಶದ ವರದಿ ಸಲ್ಲಿಕೆ ಮಾಡಲು ಮೂಲ ಕಾಂಗ್ರೆಸ್ಸಿಗರು ನಿರ್ಧಾರ ಮಾಡಿದ್ದಾರೆ. ಶನಿವಾರ ಸಂಜೆ ರಾಜ್ಯಸಭಾ ಸದಸ್ಯರೊಬ್ಬರ ಕಚೇರಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಸಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಾರ್ಜ್ ಶೀಟ್ ರೆಡಿ ಮಾಡಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.
ಉಪ ಸಮರದಲ್ಲಿ 4ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ ಅನ್ನೋ ಲೆಕ್ಕದಲ್ಲಿ ಮೂಲ ಕಾಂಗ್ರೆಸ್ಸಿಗರು ಇದ್ದಾರೆ. ಫಲಿತಾಂಶದ ನಂತರ ಡಿಸೆಂಬರ್ 11 ಅಥವಾ 12 ರಂದು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಉಪ ಸಮರದ ಹಿನ್ನಡೆಗೆ ಕಾರಣ ಏನು ಅಂತ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯಸಭಾ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಜಿ.ಸಿ.ಚಂದ್ರಶೇಖರ್, ಪ್ರೊ.ರಾಜೀವ್ ಗೌಡ, ಮಾಜಿ ಕೇಂದ್ರ ಸಚಿವ ಮುನಿಯಪ್ಪ, ಮಾಜಿ ಸಚಿವರಾದ ಮೋಟಮ್ಮ, ರಾಣಿ ಸತೀಶ್ ಸೇರಿದಂತೆ ಹಿರಿಯ ನಾಯಕರಿಂದ ನಿನ್ನೆ ಸಂಜೆ ಬೆಂಗಳೂರಿನಲ್ಲಿ ಗುಪ್ತ ಸಭೆ ನಡೆದಿದೆ.
ತಮಗಿಷ್ಟ ಬಂದವರಿಗೆ ಟಿಕೆಟ್ ಕೊಡಿಸಿಕೊಂಡು ಯಾವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷದ ಹಿನ್ನಡೆಗೆ ಕಾರಣ ಸಿದ್ದರಾಮಯ್ಯ ಎಂದು ದೂರು ಕೊಡಲು ರೆಡಿಯಾಗಿದ್ದಾರೆ. ಅಲ್ಲದೆ ಸತತ ಸೋಲು ಹಾಗೂ ಹಿನ್ನಡೆ ಆಗುತ್ತಿದ್ದರು ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರಂತೆ ವರ್ತಿಸುತಿದ್ದಾರೆ ಎಂದು ಆರೋಪ ಕೂಡ ಮಾಡಿದ್ದಾರೆ. ಸಿಎಲ್ ಪಿ ನಾಯಕನ ಸ್ಥಾನ ಅಥವಾ ವಿಪಕ್ಷ ನಾಯಕನ ಸ್ಥಾನ ಒಂದರಿಂದ ತಲೆದಂಡ ಮಾಡುವಂತೆ ಹೈ ಕಮಾಂಡ್ ಮುಂದೆ ಪಟ್ಟು ಹಿಡಿಯಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.