ಬೆಂಗಳೂರು: ಕೊರೊನಾ ಲಾಕ್ಡೌನ್ ಇನ್ನೂ ಮೂರು ದಿನಗಳಲ್ಲಿ ಮುಗಿಯಲಿದೆ. ಈಗಾಗಲೇ ಸರ್ಕಾರ ಅನೇಕ ರಿಯಾಯಿತಿಗಳನ್ನು ಘೋಷಿಸಿದೆ. ಇದೀಗ ಬೆಂಗಳೂರಿನ ವಲಸಿಗರು ಮತ್ತು ಅಸಂಘಟಿತ ಕಾರ್ಮಿಕರಿಗೆ ಬಿಬಿಎಂಪಿ ಬಿಗ್ ರಿಲೀಫ್ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ವಲಸಿಗರು ಮತ್ತು ಅಸಂಘಟಿತ ಕಾರ್ಮಿಕರು ಒಂದು ತಿಂಗಳ ಬಾಡಿಗೆಯನ್ನು ನೀಡುವಂತಿಲ್ಲ. ಈ ಬಗ್ಗೆ ಬಿಬಿಎಂಪಿ ಭೂ ಮಾಲೀಕರು, ಮನೆ ಮಾಲೀಕರಿಗೆ ಎಚ್ಚರಿಕೆ ನೀಡಿದೆ. ಮನೆ ಮಾಲೀಕರು, ಕಾರ್ಮಿಕರನ್ನು ಬಾಡಿಗೆ ಕೊಡುವಂತೆ ಪೀಡಿಸುವಂತಿಲ್ಲ. ಅಲ್ಲದೇ ಅವರ ಒಂದು ತಿಂಗಳು ಬಾಡಿಗೆ ಕೇಳುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಬಾಡಿಗೆ ಕೇಳಿದರೆ ಕಾನೂನು ರೀತಿ ಕ್ರಮಗೊಳ್ಳಲು ಪಾಲಿಕೆ ಮುಂದಾಗುತ್ತದೆ.
ವಾರ್ಡ್ ಗಳಲ್ಲಿ ವಿಪತ್ತು ನಿರ್ವಹಣಾ ಕೋಶ ತೆರೆಯಲು ಬಿಬಿಎಂಪಿ ಮುಂದಾಗಿದೆ. ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಬಿಬಿಎಂಪಿಯ 198 ವಾರ್ಡ್ ಗಳಲ್ಲಿ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಕೋಶ ಆರಂಭವಾಗಲಿದೆ. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹಾಗೂ ನಿರ್ವಹಣೆಯ ಹೊಣೆಯನ್ನು ವಿಪತ್ತು ನಿರ್ವಹಣಾ ಕೋಶ ವಹಿಸಿಕೊಳ್ಳಲಿದೆ.
ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರು ಮತ್ತು ಬಡವರಿಗೆ ಹಾಲು, ಆಹಾರ, ಆಶ್ರಯ ಒದಗಿಸಬೇಕು. ಆಶ್ರಯ ಇಲ್ಲದ ಬಡ ಜನರನ್ನು ಪಾಲಿಕೆ ನಿರ್ಮಿಸಿರುವ ನೂರು ಸೂರುಗಳಿಗೆ ಸ್ಥಳಾಂತರಿಸಲು ಮಾರ್ಷಲ್ಗಳ ಗಮನಕ್ಕೆ ತರಬೇಕು. ವಲಸೆ ಕಾರ್ಮಿಕರಿಗೆ ಮಾಲೀಕರು ಒಂದು ತಿಂಗಳು ಬಾಡಿಗೆ ಕೊಡಲು ಒತ್ತಾಯಿಸುವಂತಿಲ್ಲ. ಈ ರೀತಿ ನಡೆದರೆ ಸ್ಥಳೀಯ ಪೊಲೀಸರ ಸಹಾಯದಿಂದ ವಲಸಿಗರಿಗೆ ರಕ್ಷಣೆ ಕೊಡಲು ಕ್ರಮ ಕೈಗೊಳ್ಳಬೇಕು. ಇವೆಲ್ಲವನ್ನೂ ಪ್ರತಿ ವಲಯದ ವಿಶೇಷ ಆಯುಕ್ತರು ಹಾಗೂ ಜಂಟಿ ಆಯುಕ್ತರು ಮೇಲುಸ್ತುವಾರಿ ವಹಿಸಿಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.