ಬೆಂಗಳೂರು: ಮಂಡ್ಯದಲ್ಲಿ ಪಕ್ಷ ಸೇರ್ಪಡೆಯ ವಿಚಾರವಾಗಿ ಎಸ್ಎಂಕೆಗೆ ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ. ಸದಾಶಿವನಗರದ ಎಸ್ಎಂಕೆ ನಿವಾಸಕ್ಕೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ ಹುಟ್ಟುಹಬ್ಬದ ಶುಭಾಶಯ ಕೋರಿ ಉಭಯ ಕುಶಲೋಪರಿ ವಿಚಾರಿಸಿದರು.
ಇದೇ ವೇಳೆ ಸಚಿವ ಅಶೋಕ್ ಕೂಡ ಇದ್ದರು. ಸಿಎಂಗೆ ಸನ್ಮಾನಿಸಿದ ಎಸ್ಎಂ ಕೃಷ್ಣ, ಅಶೋಕ್ ಅವರನ್ನು ಕರೆದು ಸನ್ಮಾನಿಸಿದರು. ಆಗ ಬಿಜೆಪಿಗೆ ಸೇರಿಸಿದವರೇ ಇವರು ಎಂದು ಅಶೋಕ್ಗೆ ಎಸ್ಎಂಕೆ ಹಾರ ಹಾಕಿದರು. ಬಳಿಕ ಅನ್ಯಪಕ್ಷದವರು ಬಿಜೆಪಿ ಸೇರುವ ಬಗ್ಗೆ ಅಶೋಕ್ ಮಾಹಿತಿ ನೀಡಿದರು.
ಕೋಲಾರದ ಮಾಲೂರು ಮಂಜುನಾಥ್ ಸೇರಿದಂತೆ ಮಂಡ್ಯದ ಹಲವರು ಬಿಜೆಪಿ ಸೇರುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಮಂಡ್ಯ ಭಾಗದಲ್ಲಿ ಪಕ್ಷ ಬಲವರ್ಧನೆ, ಮುಂದಿನ ಪಕ್ಷದ ಸಮಾವೇಶ, ಅನ್ಯ ಪಕ್ಷದವರ ಸೇರ್ಪಡೆಗೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೊಕ್ ಅವರು ಎಸ್ಎಂಕೆ ಬೆಂಬಲ ಕೋರಿದರು ಎನ್ನಲಾಗಿದೆ. ಇದನ್ನೂ ಓದಿ: ದೇಗುಲದಲ್ಲಿ ಸ್ಪೀಕರ್ ಬಳಸಿ ಭಕ್ತಿಗೀತೆ ಹಾಕಿದ್ದಕ್ಕೆ ಹಲ್ಲೆ ನಡೆಸಿ ವ್ಯಕ್ತಿ ಕೊಲೆ
ಇನ್ನು ಎಸ್.ಎಂ. ಕೃಷ್ಣ ಭೇಟಿ ನಂತರ ಸಿಎಂ ಬೊಮ್ಮಾಯಿ ಮಾತನಾಡಿ, ಮಂಡ್ಯದಲ್ಲಿ ಯುವ ನಾಯಕತ್ವದಲ್ಲಿ ಪಕ್ಷ ಬರಲಿದೆ. ಮಂಡ್ಯ ಸಮಾವೇಶದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು. ಅಲ್ಲದೆ ಬ್ಯಾಚ್ ವೈಸ್ ಬಿಜೆಪಿ ಸೇರಲು ಹಲವರು ರೆಡಿ ಆಗಿದ್ದಾರೆ. ಕೋಲಾರ, ಮಂಡ್ಯ ಭಾಗದಲ್ಲಿ ಬಿಜೆಪಿ ಸೇರುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಗೆ ಚೆನ್ನಾಗಿದೆ. ನಮ್ಮ ಪಕ್ಷದ ಮೇಲೆ ಯುವಕರಿಗೆ ಜಾಸ್ತಿ ಒಲವು ಇದೆ ಎಂದು ಹೇಳಿದರು. ಇದನ್ನೂ ಓದಿ: ರಷ್ಯಾ ವಿದೇಶಾಂಗ ಸಚಿವನ ವಿವಾದಿತ ಹೇಳಿಕೆ – ಇಸ್ರೇಲ್ ಪ್ರಧಾನಿಗೆ ಪುಟಿನ್ ಕ್ಷಮೆ
ಇನ್ನೊಂದೆಡೆ ಸಚಿವ ಆರ್. ಅಶೋಕ್ ಮಾತನಾಡಿ, ಮಂಡ್ಯದಲ್ಲಿ ಹಲವರು ಬಿಜೆಪಿಗೆ ಬರುತ್ತಾರೆ. ಎಸ್.ಡಿ.ಜಯರಾಂ ಅವರ ಪುತ್ರ ಹಾಗೂ ಅಂಬರೀಶ್ ಅಭಿಮಾನಿ ಸಚ್ಚಿದಾನಂದ ಇಬ್ಬರು ಬಿಜೆಪಿಗೆ ಬರುತ್ತಾರೆ. ನಾಳೆ ಯುವ ನಾಯಕರ ಪಕ್ಷ ಸೇರ್ಪಡೆ ಆಗಲಿದೆ. ಪಾರ್ಟಿ ಹೈಕಮಾಂಡ್ ಯಾರಿಗೆ ಒಪ್ಪಿಗೆ ಕೊಟ್ಟಿದೆಯೋ ಅವರು ಎಲ್ಲರೂ ಪಕ್ಷ ಸೇರುತ್ತಾರೆ. ವರ್ತೂರು ಪ್ರಕಾಶ್ ಕೂಡ ಬಿಜೆಪಿ ಸೇರುತ್ತಾರೆ ಎಂದು ಹೇಳಿದರು. ಆದರೆ ಮಂಡ್ಯ ಸಂಸದೆ ಬಿಜೆಪಿಗೆ ಬರ್ತಾರಾ ಎಂಬ ಪ್ರಶ್ನೆಗೆ ಕಾದು ನೋಡಿ ಎಂದು ನಗುತ್ತಾ ಸಚಿವ ಆರ್. ಅಶೋಕ್ ಹೊರಟೇಬಿಟ್ಟರು.