ಬಾಗಲಕೋಟೆ: ಪ್ರವಾಸೋದ್ಯಮ ಇಲಾಖೆ ಅಧೀನದಲ್ಲಿನ ಹೋಟೆಲಿನ ಸಿಬ್ಬಂದಿ ಗ್ರಾಹಕರಿಗೆ ಹಳಸಿದ ಅವಲಕ್ಕಿ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಮಯೂರ ಚಾಲುಕ್ಯ ಹೋಟೆಲ್ ನಲ್ಲಿ ನಡೆದಿರುವ ಕರ್ಮಕಾಂಡ ಇದೀಗ ಬಹಿರಂಗವಾಗಿದೆ. ಅಡುಗೆ ಸಿಬ್ಬಂದಿ ಹಿಂದಿನ ದಿನ ಉಳಿದ ಹಳಸಿದ ಅವಲಕ್ಕಿಯನ್ನು ಪುನಃ ಗ್ರಾಹಕರಿಗೆ ಕೊಡುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಭಾರೀ ವೈರಲ್ ಆಗುತ್ತಿದೆ.
ಅಕ್ಟೋಬರ್ 24 ರಂದು ದೀಪಕ್ ಕಟ್ಟಿಮನಿ ಎಂಬುವರು ಮಯೂರ ಚಾಲುಕ್ಯ ಹೋಟೆಲ್ ಗೆ ಹೋಗಿದ್ದರು. ಈ ವೇಳೆ ಅವಲಕ್ಕಿ ಆರ್ಡರ್ ಮಾಡಿದ್ದ ದೀಪಕ್ ಅವರಿಗೆ ಅಡುಗೆ ಸಿಬ್ಬಂದಿ ಹಿಂದಿನ ದಿನ ಹಳಸಿದ ಅವಲಕ್ಕಿ ನೀಡಿದ್ದಾರೆ. ಸದ್ಯ ಹೋಟೆಲ್ ಅಡುಗೆ ಸಿಬ್ಬಂದಿಗಳ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಈ ಬಗ್ಗೆ ದೀಪಕ್ ಕಟ್ಟಿಮನಿ ಜಿಲ್ಲಾ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ.
ಸದ್ಯ ದೂರು ಪಡೆದಿರುವ ಬಾಗಲಕೋಟೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳು ಹೋಟೆಲಿಗೆ ಭೇಟಿ ನೀಡಿ ತಿಳುವಳಿಕೆ ಪತ್ರ ಕಳುಹಿಸಿಕೊಟ್ಟಿದ್ದಾರೆ. ಹೋಟೆಲ್ ನಲ್ಲಿ ಶುಚಿತ್ವ ಇಲ್ಲದಿರುವುದು, ಗೋಬಿಯಲ್ಲಿ ಹುಳುಗಳು ಕಂಡು ಬಂದಿರುವುದನ್ನು ಕೂಡ ಗಮನಿದ್ದಾರೆ. ನವೆಂಬರ್ ಐದನೇ ದಿನಾಂಕದೊಳಗೆ ಪ್ರಕರಣದ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.