ಗದಗ: ಮಹಾರಾಷ್ಟ್ರದಲ್ಲಿ ಗಲಾಟೆ ಮಾಡಿದವರೆಲ್ಲಾ ಕಾಂಗ್ರೆಸಿಗರು ಎಂದು ಸಚಿವ ಶ್ರೀರಾಮುಲು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ನವರು ಯಾವುದೇ ಪಕ್ಷದಲ್ಲಿದ್ರೂ ಅರೆಸ್ಟ್ ಮಾಡುವ ಕೆಲಸ ಆಗುತ್ತೆ. ಗಲಭೆ ಮಾಡಿದವರಲ್ಲಿ ಕೆಲವು ಕಿಡಿಗೇಡಿಗಳು, ಕಾಂಗ್ರೆಸ್ ಪಕ್ಷದ ಚೇಲಾಗಳಾಗಿದ್ದಾರೆ. ನನಗೆ ಗೊತ್ತಿರುವಂತೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಇದರಲ್ಲಿದ್ದಾರೆ. ಕರ್ನಾಟಕದಲ್ಲಿ ಇರುವ ಕೆಲವು ಪುಂಡರು ಕುಮ್ಮಕ್ಕು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಕಾಂಗ್ರೆಸ್, ಎಂಇಎಸ್ ಯಾರೇ ಇದ್ದರೂ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದರು.
ಶಿವಾಜಿ, ರಾಯಣ್ಣ ನಮಗಾಗಿ ಪ್ರಾಣತ್ಯಾಗ ಮಾಡಿದವರು. ಯಾವುದೇ ವ್ಯಕ್ತಿ, ಸಂಘಟನೆಯವರು ಇದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಕುಮ್ಮಕ್ಕು ಕೊಡುತ್ತಿದ್ದಾರೆ. ಟ್ವೀಟ್ ಮಾಡುವ ಮೂಲಕ ಪ್ರಚೋದನೆ ನೀಡುತ್ತಿದ್ದಾರೆ. ಗಲಾಟೆ ಮಾಡುವ ಸಂಪ್ರದಾಯವನ್ನ ಎಂಇಎಸ್ ಮೈಗೂಡಿಸಿಕೊಂಡಿದೆ. ಗಲಾಟೆ ಸಂಪ್ರದಾಯ ಕನ್ನಡಿಗರು ಸಹಿಸಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: MES ಗಲಾಟೆ ಮಾಡಿದೆ ಅಂತ ನಾನು ಹೇಳಲ್ಲ: ಡಿ.ಕೆ ಶಿವಕುಮಾರ್
ಇದೇ ವೇಳೆ ಎಂಇಎಸ್ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಂಇಎಸ್ ಬ್ಯಾನ್ ಮಾಡುವುದಕ್ಕೆ ಸಂಪೂರ್ಣ ಬೆಂಬಲವಿದೆ. ಬ್ಯಾನ್ ಮಾಡೋದ್ರಿಂದ ಅನುಕೂಲ ಆಗುತ್ತೆ. ಈ ಬಗ್ಗೆ ಸಾಕಷ್ಟು ವರದಿಯನ್ನೂ ಕೇಂದ್ರಕ್ಕೆ ನೀಡಿದ್ದೇವೆ ಎಂದರು. ಇನ್ನು ಸಿಎಂ ಬದಲಾವಣೆ ಕುರಿತು ಮಾತನಾಡಿ, ಸಿಎಂ ಬದಲಾವಣೆ ವಿಚಾರ ಪಾರ್ಟಿ ತೀರ್ಮಾನ ತೆಗೆದುಕೊಳ್ಳುತ್ತದೆ. ಯಾವುದೇ ಬದಲಾವಣೆ ಇಲ್ಲ ಕೇವಲ ಊಹಾಪೋಹ ಇನ್ಯಾರೋ ಮಾತಾಡ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಬೆಳಗಾವಿ ಪ್ರಕರಣದಲ್ಲಿ MESನ ಪ್ರಮುಖರನ್ನು ಬಂಧಿಸಲಾಗಿದೆ: ಬೊಮ್ಮಾಯಿ
ಅಧಿವೇಶನ ನಡೆಸಲು ಕಾಂಗ್ರೆಸ್ ನಾಯಕರು ಬಿಡುತ್ತಿಲ್ಲ. ರಾಜಕಾರಣದಲ್ಲಿ ಕಾಂಗ್ರೆಸ್ ನಾಟಕ ಜೋರಾಗಿದೆ. ಬದುಕಿದ್ದೆವೆಂದು ತೋರಿಸಲು ಟ್ರ್ಯಾಕ್ಟರ್, ಎತ್ತಿನ ಬಂಡಿ ತರುವ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.