ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಅತ್ಯಂತ ಕಠಿಣ ನಿಯಮಗಳಿಗೆ ಬೇಸತ್ತು ಬ್ಯಾಂಕ್ನಿಂದ ನಿಯೋಜನೆಗೊಂಡಿದ್ದ 23 ಮಂದಿ ಸಿಬ್ಬಂದಿ ತಮ್ಮ ಕೆಲಸಕ್ಕೆ ಸಾಮೂಹಿಕ ರಾಜೀನಾಮೆ(Mass Resignation) ನೀಡಿದ್ದಾರೆ.
ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ (Ram Mandir) ದೇಶ-ವಿದೇಶಗಳ ಭಕ್ತರಿಂದ ಕೋಟ್ಯಂತರ ರೂಪಾಯಿ ದೇಣಿಗೆ ಹರಿದುಬರುತ್ತಿದೆ. ಆದರೆ, ಈ ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಾರಿಗೊಳಿಸಿರುವ ಹೊಸ ಸುರಕ್ಷತಾ ನಿಯಮಗಳು ಈಗ ಭಾರಿ ಸಂಚಲನ ಮೂಡಿಸಿವೆ.
ಹೊಸ ನಿಯಮ ಏನು?
ಮಂದಿರದ ಕಾಣಿಕೆ ಪೆಟ್ಟಿಗೆಯಿಂದ ಬರುವ ಹಣ ಮತ್ತು ಚಿನ್ನಾಭರಣಗಳನ್ನು ಎಣಿಸುವ ಸಿಬ್ಬಂದಿ ಯಾವುದೇ ಕಾರಣಕ್ಕೂ ಜೇಬುಗಳಿರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಕೇವಲ ಜೇಬಿಲ್ಲದ ಉಡುಪುಗಳನ್ನು ಧರಿಸಿ ಮಾತ್ರ ಎಣಿಕೆ ಕೋಣೆಗೆ ಬರಬೇಕು ಎಂದು ಟ್ರಸ್ಟ್ ಕಡ್ಡಾಯಗೊಳಿಸಿದೆ.
ಕಾಣಿಕೆ ಎಣಿಕೆ ಮಾಡಲು ಒಳಗೆ ಹೋಗುವಾಗ ಮತ್ತು ಎಣಿಕೆ ಮುಗಿಸಿ ಹೊರಬರುವಾಗ ಪೊಲೀಸರು ಸಿಬ್ಬಂದಿಯನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತಾರೆ. ಒಳಗೆ ಹೋಗುವಾಗ ಬೆಲ್ಟ್, ಪರ್ಸ್ ಅಥವಾ ಯಾವುದೇ ವೈಯಕ್ತಿಕ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಎಣಿಕೆ ನಡೆಯುವ ಇಡೀ ಕೊಠಡಿಯು ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುತ್ತದೆ. ಇದನ್ನೂ ಓದಿ: LPG ಸಿಲಿಂಡರ್ ಅಭಾವದ ನಡುವೆ ʻಮಹಾʼ ಮಳೆಗೆ ಕೊಚ್ಚಿ ಹೋದ 3,000 ಸಿಲಿಂಡರ್

ರಾಜೀನಾಮೆ ಯಾಕೆ?
ರಾಮಮಂದಿರದ ದೇಣಿಗೆಯನ್ನು ಎಣಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ವಿವಿಧ ಬ್ಯಾಂಕುಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಇತ್ತೀಚೆಗೆ ಜಾರಿಗೆ ತಂದ ಈ ಹೊಸ ನಿಯಮಗಳು ಹಾಗೂ ಪೊಲೀಸರ ತಪಾಸಣಾ ಶೈಲಿ ತಮಗೆ ಮಾಡಿದ ಅವಮಾನ ಮತ್ತು ಕಿರುಕುಳ ಎಂದು ಭಾವಿಸಿದ 23 ಮಂದಿ ಸಿಬ್ಬಂದಿ ಒಟ್ಟಾಗಿ ರಾಜೀನಾಮೆ ನೀಡಿದ್ದಾರೆ. ಭದ್ರತೆಯ ಹೆಸರಿನಲ್ಲಿ ತಮ್ಮ ಪ್ರಾಮಾಣಿಕತೆಯನ್ನು ಶಂಕಿಸಲಾಗುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: 500 ರೂ. ನೋಟಿನಿಂದ ಆರಂಭವಾಗಿ 3 ಕೋಟಿ ಕಳ್ಳತನ; ದೇಣಿಗೆ ಹಗರಣದಲ್ಲಿ ತಪ್ಪೊಪ್ಪಿಕೊಂಡ ನಾಲ್ವರು ಆರೋಪಿಗಳು
ತಮ್ಮ ತಿಂಗಳ ಸಂಬಳವನ್ನು ಕಡಿಮೆ ಮಾಡಲಾಗಿದೆ. ವಿಭಿನ್ನ ಉದ್ಯೋಗಿಗಳು ಒಂದೇ ರೀತಿಯ ಕೆಲಸ ಮಾಡುತ್ತಿದ್ದರೂ ವಿಭಿನ್ನ ವೇತನವನ್ನು ಪಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮಾಸಿಕ ರಜೆ ದಿನಗಳ ಸಂಖ್ಯೆಯನ್ನು ಮೊಟಕುಗೊಳಿಸಲಾಗಿದೆ ಎಂದು ಅವರ ದೂರಿದ್ದಾರೆ.
ಟ್ರಸ್ಟ್ ನಿರ್ಧಾರಕ್ಕೆ ಕಾರಣವೇನು?:
ಮಂದಿರಕ್ಕೆ ಪ್ರತಿದಿನ ಲಕ್ಷಾಂತರ ರೂಪಾಯಿ ನಗದು ಕಾಣಿಕೆ ಬರುವುದರಿಂದ ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಹಣ ದುರುಪಯೋಗ ನಡೆಯಬಾರದು ಎಂಬ ಉದ್ದೇಶದಿಂದ ಟ್ರಸ್ಟ್ ಈ ನಿರ್ಧಾರ ಕೈಗೊಂಡಿದೆ. ಇದಕ್ಕೂ ಮುನ್ನ ಕೆಲವು ದೇಣಿಗೆ ದುರುಪಯೋಗದ ವದಂತಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಮಂಡಳಿ ಸಮರ್ಥಿಸಿಕೊಂಡಿದೆ. ಪ್ರಸ್ತುತ ರಾಜೀನಾಮೆ ನೀಡಿರುವ ಸಿಬ್ಬಂದಿಗಳ ಜಾಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದ್ದು, ಕಠಿಣ ನಿಯಮಗಳ ನಡುವೆಯೇ ದೇಣಿಗೆ ಎಣಿಕೆ ಕಾರ್ಯ ಮುಂದುವರಿದಿದೆ.
ಈ ಹಿಂದೆ ಸ್ವಚ್ಛತಾ ಕೆಲಸದ ಸಿಬ್ಬಂದಿಯನ್ನೂ ದೇಣಿಗೆಗಳನ್ನು ಎಣಿಸುವ ಕಾರ್ಯವನ್ನು ನಿಯೋಜಿಸಲಾಗಿತ್ತು, ಆದರೆ ಈಗ ಅವರನ್ನು ತಮ್ಮ ಮೂಲ ಮನೆಗೆಲಸದ ಕರ್ತವ್ಯಗಳಿಗೆ ವರ್ಗಾಯಿಸಲಾಗುತ್ತದೆ.
ಭವಿಷ್ಯದಲ್ಲಿ ಮಾನವ ಹಸ್ತಕ್ಷೇಪವನ್ನು (Human Intervention) ಸಂಪೂರ್ಣವಾಗಿ ತಡೆಗಟ್ಟಲು ಟ್ರಸ್ಟ್ ನಿರ್ಧರಿಸಿದೆ. ಇನ್ನುಮುಂದೆ ಬ್ಯಾಂಕ್ ಅಧಿಕಾರಿಗಳು ಕೈಯಿಂದ ಹಣ ಎಣಿಸುವುದನ್ನು ನಿಲ್ಲಿಸಿ, ಹೈಟೆಕ್ ನೋಟು ಎಣಿಕೆ ಯಂತ್ರಗಳು ಮತ್ತು ಸ್ವಯಂಚಾಲಿತ ತಂತ್ರಜ್ಞಾನವನ್ನು ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ.
