– ಪಬ್ಲಿಕ್ ಟಿವಿ ವಿದ್ಯಾಪೀಠದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮಾಹಿತಿ
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಅತ್ಯಾಧುನಿಕವಾಗಿದ್ದು, ಈಗಿನ ವ್ಯವಸ್ಥೆಗೆ ತಕ್ಕಂತೆ ರೂಪಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.
ಪ್ಯಾಲೆಸ್ ಗ್ರೌಂಡ್ಸ್ ನ ಗಾಯತ್ರಿ ವಿಹಾರದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಪಬ್ಲಿಕ್ ಟಿವಿಯ ವಿದ್ಯಾಪೀಠ ಮೇಳಕ್ಕೆ ಇಂದು ಚಾಲನೆ ದೊರೆತಿದೆ. ಕಾರ್ಯಕ್ರಮದಲ್ಲಿ ಭಾವಹಿಸಿ, ಹೊಸ ಶಿಕ್ಷಣ ನೀತಿ ಕುರಿತು ಅಶ್ವಥ್ ನಾರಾಯಣ್ ಅವರು ವಿವರಿಸಿದರು. ಈಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಕೋರ್ಸ್ಗೆ ಕಾಂಬಿನೇಶನ್ ಇದೆ. ಆದರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೋರ್ಸ್ ಆ್ಯಂಡ್ ಕಾಂಬಿನೇಶನ್ನಿಂದ ಕೋರ್ಸ್ ಆ್ಯಂಡ್ ಸಬ್ಜೆಕ್ಟ್ ಗೆ ಬದಲಾಯಿಸಿದ್ದೇವೆ. ಕೋರ್ಸ್ಗಳಲ್ಲಿ ಮೊದಲು ಕಾಂಬಿನೇಶನ್ ಆಫರ್ ಮಾಡುತ್ತಿದ್ದರು. ಆದರೆ ಇದೀಗ ಹೊಸ ಶಿಕ್ಷಣ ನೀತಿಯಲ್ಲಿ ಕೋರ್ಸ್ಗಳಲ್ಲಿನ ವಿಷಯಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ತಮಗಿಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಸಂಪೂರ್ಣ ವ್ಯಕ್ತಿತ್ವ ನಿರ್ಮಾಣ ಮಾಡಲು ಏನು ಬೇಕೆಂಬುದು ತಿಳಿದಿದೆ. ಆದರೂ ನಾವು ಕೇವಲ ಅಕಾಡೆಮಿಕ್ ದೃಷ್ಟಿಕೋನದಲ್ಲಿ ಮಾತ್ರ ನೋಡುತ್ತಿದ್ದೆವು. ಇದರಲ್ಲೂ ಸಾಕಷ್ಟು ಮಿತಿಗಳಿದ್ದವು. ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಳ್ಳುವ ಬದಲು ಸಂಸ್ಥೆಯನ್ನು ಕೇಂದ್ರವಾಗಿರಿಸಿಕೊಂಡಿದ್ದೆವು. ಹೀಗೆ ಹಳೆಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದೆವು. ಆದರೆ ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಅಮೂಲಾಗ್ರ ಬದಲಾವಣೆ ತರುತ್ತಿದ್ದೇವೆ ಎಂದರು.
ಕಲಾ ವಿಭಾಗದವರು, ವಿಜ್ಞಾನ ಓದುವ ಹಾಗಿಲ್ಲ, ವಿಜ್ಞಾನ ವಿಭಾಗದವರು ಕಲಾ ವಿಭಾಗಕ್ಕೆ ಹೋಗಂಗಿಲ್ಲ ಎಂಬ ಬೇಧವನ್ನು ತೊಡೆದಿದ್ದೇವೆ. ಈಗ ಯಾರು ಯಾವ ವಿಷಯ ಬೇಕಿದ್ದರೂ ಓದಬಹುದು. ಅಲ್ಲದೆ ಈ ಹಿಂದೆ ಎನ್ಸಿಸಿ, ಎನ್ಎಸ್ಎಸ್, ಸೇರಿದಂತೆ ಇತರೆ ಚಟುವಟಿಕೆಗಳು ಬೇರೆಯಾಗಿದ್ದವು. ಆದರೆ ಇದೀಗ ಇವೆಲ್ಲವನ್ನೂ ಒಳಗೊಂಡ ಶಿಕ್ಷಣ ವ್ಯವಸ್ಥೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಮಾಡಿದ್ದೇವೆ. ವಿದ್ಯಾರ್ಥಿ ವಿಷಯಗಳನ್ನು ಬ್ರಾಡ್ ಆಗಿ, ಡೀಪ್ ಆಗಿ ಯಾವುದೇ ರೀತಿಯಲ್ಲಿ ಕಲಿಯಲು ಅವಕಾಶ ನೀಡಲಾಗಿದೆ. ಒಂದು, ಎರಡು ವಿಷಯಗಳನ್ನು ಮೇಜರ್ ಸಬ್ಜೆಕ್ಟ್ ಆಗಿ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಒಂದೇ ವಿಷಯವನ್ನು ಡೀಪ್ ಆಗಿ ಅಧ್ಯಯನ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಯ ವಿದ್ಯಾಪೀಠಕ್ಕೆ ಚಾಲನೆ
ಮಲ್ಟಿ ಎಂಟ್ರಿ, ಮಲ್ಟಿ ಎಕ್ಸಿಟ್ ಅಂದರೆ ಯಾವುದೇ ವಿದ್ಯಾರ್ಥಿ ಪದವಿಗೆ ಸೇರಿ ಕಾರಾಣಾಂತರಗಳಿಂದ ಒಂದೇ ವರ್ಷ ಪದವಿ ಓದಿ ಡ್ರಾಪ್ ಔಟ್ ಆಗುತ್ತಾರೆ. ಹೀಗೆ ಹೊರಗೆ ಹೋದಾಗ ಆ ವಿದ್ಯಾರ್ಥಿಗೆ ಏನೂ ಸಿಗಲ್ಲ. ಆದರೆ ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿ ಕಲಿತಿದ್ದಕ್ಕೆ ಮಾನ್ಯತೆ ಸಿಗುತ್ತದೆ. ಒಂದು ವರ್ಷ ಕಲಿತಿದ್ದಕ್ಕೂ ಸರ್ಟಿಫಿಕೇಟ್ ಸಿಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಇಂದು ಚಾಲನೆ – ಇಂದಿನ ಕಾರ್ಯಕ್ರಮಗಳು ಏನು?
ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಮಾತನಾಡಿ, ಕೊರೊನಾ ಕಾರಣದಿಂದ ಶಿಕ್ಷಣ ವಲಯ ನಲುಗಿದೆ. ನಾವು ಮರಳಿ ಪುಟಿದೇಳಬೇಕಿದೆ. ಎಷ್ಟೋ ಶಿಕ್ಷಣ ಸಂಸ್ಥೆಗಳು ಸಿಬ್ಬಂದಿಗೆ ಸಂಬಳ ಕೊಡಲು ಆಸ್ತಿಗಳನ್ನು ಮಾರಿವೆ. ಮಕ್ಕಳು ಸಹ ತುಂಬಾ ಕಷ್ಟದಲ್ಲಿ ಸಿಲುಕಿದ್ದಾರೆ. ಒಂದು ಕಡೆ ಹಣದ ಸಮಸ್ಯೆಯಾದರೆ, ಇನ್ನೊಂದೆಡೆ ಏನು ಮಾಡಬೇಕೆಂಬ ಸ್ಪಷ್ಟತೆಯೇ ಸಿಗುತ್ತಿಲ್ಲ. ಎರಡೂ ಕಡೆ ಸವಾಲುಗಳಿವೆ. ಈ ಕೊರೊನಾ ಪರಿಸ್ಥಿತಿಯನ್ನು ನಾವು ಎದುರಿಸಲೇಬೇಕಿದೆ. ಹೀಗಾಗಿಯೇ ಇಂತಹ ಕಷ್ಟದ ಸಂದರ್ಭದಲ್ಲಿಯೂ ವಿದ್ಯಾಪೀಠ 4ನೇ ಆವೃತ್ತಿಯನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.