ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ ವಿದ್ಯಾಪೀಠ 4ನೇ ಆವೃತ್ತಿಗೆ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಚಾಲನೆ ನೀಡಿದರು.
ಪ್ಯಾಲೇಸ್ ಗ್ರೌಂಡ್ಸ್ ನ ಗಾಯತ್ರಿ ವಿಹಾರದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ವಿದ್ಯಾಪೀಠ ಮೇಳಕ್ಕೆ ಇಂದು ಚಾಲನೆ ದೊರೆತಿದೆ. ಕಾರ್ಯಕ್ರಮದ ಉದ್ಘಾಟನೆಯಲ್ಲಿ ರೇವಾ ವಿಶ್ವವಿದ್ಯಾಲಯ, ಗಾರ್ಡನ್ ಸಿಟಿ ವಿಶ್ವವಿದ್ಯಾಲಯ, ರಾಮಯ್ಯ ವಿಶ್ವವಿದ್ಯಾಲಯ, ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮುಖ್ಯಸ್ಥರು ಭಾಗಿಯಾಗಿದ್ದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಇಂದು ಚಾಲನೆ – ಇಂದಿನ ಕಾರ್ಯಕ್ರಮಗಳು ಏನು?
ವಿದ್ಯಾಪೀಠ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ಪಡೆಯಬಹುದು. ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯಮಿಕ ಕೋರ್ಸ್ ಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಕೆಸಿಇಟಿ, ನೀಟ್ ಮತ್ತು ಕಾಮೆಡ್ ಕೆ ಪರೀಕ್ಷೆಗಳಿಗಾಗಿ ಕೆಇಎ ಅಧಿಕಾರಿಗಳಿಂದ ಆಪ್ತ ಸಮಾಲೋಚನೆ ಕೂಡ ನಡೆಸಬಹುದು. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಅವಕಾಶವಿದೆ.
ಎರಡೂ ದಿನ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ಇರಲಿದ್ದು, ಅರ್ಧಗಂಟೆ ಉಪನ್ಯಾಸ ನಡೆದ ಬಳಿಕ 15 ನಿಮಿಷ ಪ್ರಶ್ನೋತ್ತರಕ್ಕೂ ಅವಕಾಶ ಇದೆ. ಪಿಯುಸಿಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಲಾಗುತ್ತಿದೆ.
ಕೌನ್ಸಿಲರ್ ಗಳು, ಶಿಕ್ಷಣ ತಜ್ಞರು, ಹಣಕಾಸು ಸಲಹೆಗಾರರು, ಪೋಷಕರು, ಪಿಯುಸಿ ವಿದ್ಯಾರ್ಥಿಗಳು, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಭಾಗವಹಿಸುತ್ತಿದ್ದು, ಶಿಕ್ಷಣ, ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಸ್ಕಾಲರ್ಶಿಪ್ ಬಗ್ಗೆ ಕೆನರಾ ಬ್ಯಾಂಕ್ ಮೂಲಕ ಮಾಹಿತಿ ನೀಡಲಾಗುತ್ತದೆ.
ಯಾರೆಲ್ಲ ಭಾಗವಹಿಸುತ್ತಾರೆ?
ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್, ಆರ್ಕಿಟೆಕ್ಚರ್, ಕಾಮರ್ಸ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು, ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು, ಸಮೂಹ ಸಂವಹನ, ಎಂಬಿಎ ಇನ್ಸ್ಟಿಟ್ಯೂಷನ್, ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು.
ಯಾರೆಲ್ಲ ಆಗಮಿಸಬಹುದು?
ಕೌನ್ಸೆಲರ್ಗಳು, ಶಿಕ್ಷಣ ತಜ್ಞರು, ಹಣಕಾಸು ಸಲಹೆಗಾರರು, ಪೋಷಕರು, ಪಿಯುಸಿ ವಿದ್ಯಾರ್ಥಿಗಳು, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವ ಉದ್ಯೋಗಿಗಳು.
ದಿನಾಂಕ : ಸೆಪ್ಟೆಂಬರ್ 18, 19
ಸ್ಥಳ : ಗಾಯತ್ರಿ ವಿಹಾರ್, ಅರಮನೆ ಮೈದಾನ, ಬೆಂಗಳೂರು
ಸಮಯ : ಬೆಳಗ್ಗೆ 9:30 ರಿಂದ ಸಂಜೆ 6.00 ಗಂಟೆಯವರೆಗೆ
ಶನಿವಾರ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಜೊತೆ ಮುಖ್ಯ ಅತಿಥಿಗಳಾಗಿ ರೇವಾ ವಿಶ್ವವಿದ್ಯಾಲಯದ ಕುಲಪತಿ ಶ್ಯಾಮರಾಜು, ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಪತಿ ಡಾ.ವಿ.ಜಿ.ಜೋಸೆಫ್, ಕೇಂಬ್ರಿಡ್ಜ್ ಸಮೂಹ ಸಂಸ್ಥೆಯ ಮುಖ್ಯಸ್ಥ ಡಿ.ಕೆ.ಮೋಹನ್, ಆಚಾರ್ಯ ಸಂಸ್ಥೆಗಳ ಕಾರ್ಪೊರೇಟ್ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕ ವಿಶೇಷ ಚಂದ್ರಶೇಖರ್ ಭಾಗವಹಿಸಲಿದ್ದಾರೆ.
ಶನಿವಾರದ ಕಾರ್ಯಕ್ರಮಗಳು ಏನು?
ಬೆಳಗ್ಗೆ 11:30 ರಿಂದ 12 ಗಂಟೆಯವರೆಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ‘ರಾಷ್ಟ್ರೀಯ ಶಿಕ್ಷಣ ನೀತಿ ? 2020: ಸಮಗ್ರ ವಿಧಾನ ಮತ್ತು ಅನುಷ್ಠಾನ’ ದ ಬಗ್ಗೆ ಮಾತನಾಡಲಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಸಿಇಟಿ ಮತ್ತು ಕಾಮೆಡ್ಕೆ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಕಾಮೆಡ್ ಕೆ ಕಾರ್ಯದರ್ಶಿ ಕುಮಾರ್ ಮತ್ತು ಸಿಇಟಿ ವಿಭಾಗದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಕಾಲಿಗೆ ಹಾಕೋ ಚಪ್ಪಲಿಗೆ ಗ್ಯಾರಂಟಿ ಕೇಳ್ತೀವಿ, ಲಸಿಕೆಗೆ ಗ್ಯಾರಂಟಿ ಬೇಡ್ವಾ: ಅಧಿಕಾರಿಗಳಿಗೆ ಯುವಕನ ಪ್ರಶ್ನೆ
ಮಧ್ಯಾಹ್ನ ಭೋಜನದ ಬಳಿಕ 2 ರಿಂದ 2:45ರವರೆಗೆ ನಟ, ಯೂಥ್ ಐಕಾನ್ ರಮೇಶ್ ಅರವಿಂದ್ ‘ಯಶಸ್ಸಿನ ರಹಸ್ಯ’ದ ಬಗ್ಗೆ ಮಾತನಾಡಲಿದ್ದಾರೆ.
ಮಧ್ಯಾಹ್ನ 3 ರಿಂದ 3:45ರವರೆಗೆ ‘ನ್ಯೂ ಏಜ್ ಪ್ರೋಗ್ರಾಮ್ಸ್’ ಬಗ್ಗೆ ಸಂವಾದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಟಿಯು ಕಾರ್ಯಕಾರಿ ಸಮಿತಿ ಸದಸ್ಯ ಡಾ.ರವಿಶಂಕರ್, ಬೆಂಗಳೂರು ವಿಶ್ವವಿದ್ಯಾಲಯದ ವೇಣು ಗೋಪಾಲ್ ಕೆ.ಆರ್, ಕೇಂಬ್ರಿಡ್ಜ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಿ.ಕೆ. ಮೋಹನ್ ಭಾಗವಹಿಸಲಿದ್ದಾರೆ. ಡಾ.ಕಿರಣ್ ಮಾಗಾವಿ ಅವರು ಸಂವಾದವನ್ನು ನಡೆಸಿಕೊಡಲಿದ್ದಾರೆ.