ಮುಂಬೈ: ಶಿವಸೇನಾ ಶಾಸಕರು ಬಂಡಾಯವೆದ್ದು ಮಹಾರಾಷ್ಟ್ರ ಮೈತ್ರಿ ಸರ್ಕಾರ ಪತನದಿಂದಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಉದ್ಧವ್ ಠಾಕ್ರೆಗೆ ಮತ್ತೊಂದು ಆಘಾತ ಎದುರಾಗಿದೆ. ಶಿವಸೇನಾ ನಾಯಕ ಸ್ಥಾನಕ್ಕೆ ರಾಮದಾಸ್ ಕದಂ ಅವರು ರಾಜೀನಾಮೆ ನೀಡಿದ್ದಾರೆ.
ಕದಂ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ನಿಧನ ನಂತರ ಮಹಾರಾಷ್ಟ್ರದ ಮಾಜಿ ಸಿಎಂ (ಉದ್ಧವ್ ಠಾಕ್ರೆ) ತಮ್ಮದೇ ಆದ ನಾಯಕರನ್ನು ಒಳಗೊಳ್ಳಲು ವಿಫಲರಾಗಿದ್ದಾರೆ. ಇದರಿಂದ ಶಿವಸೇನಾ ಮುಖ್ಯಸ್ಥರ ಹುದ್ದೆಗೆ ಯಾವುದೇ ಮೌಲ್ಯವಿಲ್ಲ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಈ ಚುನಾವಣೆ ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ನಿರ್ಧರಿಸುತ್ತೆ: ಯಶವಂತ್ ಸಿನ್ಹಾ
2019 ರಲ್ಲಿ ಶಿವಸೇನಾವು ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಕೈಜೋಡಿಸಲು ನಿರ್ಧರಿಸಿದಾಗ, ಬಾಳಾಸಾಹೇಬ್ ಠಾಕ್ರೆ ತಮ್ಮ ಜೀವನದುದ್ದಕ್ಕೂ ವಿರೋಧಿಸಿದವರೊಂದಿಗೆ ಮೈತ್ರಿ ಮಾಡಿಕೊಳ್ಳಬೇಡಿ ಎಂದು ಠಾಕ್ರೆಗೆ ಮನವಿ ಮಾಡಿದ್ದೆ. ಆದರೆ ಅದನ್ನು ಪರಿಗಣಿಸಲಿಲ್ಲ. ಪಕ್ಷದಲ್ಲಿ ನನಗೆ ಮತ್ತು ನನ್ನ ಪುತ್ರ ಯೋಗೇಶ್ ಕದಂ ಅವರನ್ನು ಪದೇ ಪದೇ ಅವಮಾನಿಸಲಾಗಿದೆ ಎಂದು ರಾಮದಾಸ್ ತಮ್ಮ ರಾಜೀನಾಮೆಗೆ ಕಾರಣ ತಿಳಿಸಿದ್ದಾರೆ.
ಕದಂ ಅವರು ರಾಜೀನಾಮೆ ನೀಡಿದ ನಂತರ ಈಗ ಉದ್ಧವ್ ಠಾಕ್ರೆ ಬಣದಲ್ಲಿ ಉಳಿದಿರುವವರು ಕೇವಲ 8 ನಾಯಕರು. ಮಹಾ ವಿಕಾಸ್ ಅಘಾಡಿ ಮೈತ್ರಿ ವಿರುದ್ಧ ಬಂಡೆದ್ದ ಶಿವಸೇನಾ ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಉದ್ಧವ್ ಬಣ ತೊರೆದರು. ನಂತರ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಶಿಂಧೆ ನೇತೃತ್ವದಲ್ಲಿ (ಸಿಎಂ) ಸರ್ಕಾರ ರಚಿಸಲಾಯಿತು. ಇದನ್ನೂ ಓದಿ: ನಾನು ಅಪರಾಧಿಯಲ್ಲ: ಸಿಂಗಾಪುರ ಭೇಟಿಗೆ ಅನುಮತಿ ಸಿಗದೇ ಕೇಜ್ರಿವಾಲ್ ಅಸಮಾಧಾನ
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನಕ್ಕೆ ಕಾರಣವಾದ ಇತ್ತೀಚಿನ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಜುಲೈ 20 ರಂದು ವಿಚಾರಣೆಗೆ ನಿಗದಿಪಡಿಸಿದೆ.