ಅಹಮದಾಬಾದ್: ಗುಜರಾತ್ನ 2002ರ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣ ಸಂಬಂಧ ಎಸ್ಐಟಿ ವಿಶೇಷ ನ್ಯಾಯಾಲಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಜರಾಗಿ, ಮಾಜಿ ಸಚಿವೆ ಮಾಯಾ ಕೊಡ್ನಾನಿ ಪರ ಸಾಕ್ಷ್ಯ ಹೇಳಿದ್ದಾರೆ.
ಹತ್ಯಾಕಾಂಡ ನಡೆದ ಫೆಬ್ರವರಿ 28, 2002ರಂದು ಮಾಯಾ ಕೊಡ್ನಾನಿ ಅವರು ವಿಧಾನಸಭೆಯಲ್ಲಿ ಇದ್ದರು. ನಂತರ ಸೋಲಾ ನಾಗರಿಕ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಕೊಡ್ನಾನಿಯವರನ್ನೂ ಭೇಟಿಯಾಗಿದ್ದೆ. ಮರಣೋತ್ತರ ಪರೀಕ್ಷೆಗಳು ನಡೆಯುತ್ತಿದ್ದವು ಎಂದು ಸಾಕ್ಷ್ಯ ನುಡಿದಿದ್ದಾರೆ.
ನಮ್ಮ ಸುತ್ತ ಜನರ ಗುಂಪು ಸೇರುತ್ತಿದ್ದಂತೆಯೇ ಪೊಲೀಸರು ನಮ್ಮನ್ನು ಪ್ರತ್ಯೇಕವಾಗಿ ಭದ್ರತಾ ಸ್ಥಳಕ್ಕೆ ಕರೆದೊಯ್ದರು. ಆದ್ರೆ, ಕೊಡ್ನಾನಿ ಅವರನ್ನ ಪೊಲೀಸರು ಎಲ್ಲಿಗೆ ಕೊಂಡೊಯ್ದರು ಅಂತ ಗೊತ್ತಿಲ್ಲ ಎಂದು ಅಮಿತ್ ಶಾ ಹೇಳಿಕೆ ಕೊಟ್ಟಿದ್ದಾರೆ.
2002ರ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಧಿಸಿದಂತೆ ಸಪ್ಟೆಂಬರ್ 18ರಂದು ವಿಚಾರಣೆಗೆ ಹಾಜರಾಗುವಂತೆ ವಿಶೇಷ ಎಸ್ಐಟಿ ನ್ಯಾಯಾಲಯ ಸೆ.12ರಂದು ಅಮಿತ್ ಶಾಗೆ ಸಮನ್ಸ್ ಜಾರಿ ಮಾಡಿತ್ತು. ಈ ವೇಳೆ ಸೆ.18 ರಂದು ವಿಚಾರಣೆಗೆ ಗೈರಾದರೆ ಮತ್ತೆ ಸಮನ್ಸ್ ಜಾರಿ ಮಾಡುವುದಿಲ್ಲ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತ್ತು.
ಏನಿದು ಪ್ರಕರಣ?
ನರೋಡಾ ಗಾಮ್ ಹತ್ಯಾಕಾಂಡ ನಡೆದಾಗ ನಾನು ತಾನು ಆ ಘಟನಾ ಸ್ಥಳದಲ್ಲಿರಲಿಲ್ಲ ಎಂಬುವುದನ್ನು ಮಾಯಾ ಕೊಡ್ನಾನಿ ಸಾಬೀತು ಪಡಿಸಬೇಕಿದ್ದು, ಅಮಿತ್ ಶಾ ಸೇರಿದಂತೆ 14 ಮಂದಿಯನ್ನು ಸಾಕ್ಷಿಗಳಾಗಿ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಮಾಯಾ ಪತಿ ಸುರೇದ್ರ ಕೊಡ್ನಾನಿ, ಬಿಜೆಪಿ ಶಾಸಕ ಅಮರೇಶ್ ಗೋವಿಂದಭಾಯಿ ಪಟೇಲ್ ಸೇರಿದಂತೆ 12 ಮಂದಿ ಸಾಕ್ಷಿ ಹೇಳಿದ್ದಾರೆ. ಅಮಿತ್ ಶಾ ಮತ್ತು ಇತರ ಕೆಲವರಿಗೆ ಕೊಡ್ನಾನಿ ಪರ ರಕ್ಷಣಾ ಸಾಕ್ಷಿಯಾಗಿ ಹಾಜರಾಗಲು ಸಮನ್ಸ್ ನೀಡುವ ಬಗ್ಗೆ ಏಪ್ರಿಲ್ನಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಾಲಯ ಅನುಮತಿ ನೀಡಿತ್ತು.
ಆರೋಪ ಏನಿದೆ?
ನರೋಡಾ ಗಾಮ್ ನಲ್ಲಿ ಸಾವಿರಾರು ಮಂದಿಯನ್ನು ಜಮಾಯಿಸಿ, ಪ್ರಚೋದಿಸಿ ಹತ್ಯಾಕಾಂಡ ನಡೆಸಿದ ಆರೋಪ ಮಾಯಾ ಕೊಡ್ನಾನಿ ಮೇಲಿದೆ. 2002ರ ಫೆಬ್ರವರಿ 28ರಂದು ಈ ಹತ್ಯಾಕಾಂಡ ನಡೆದಿದ್ದು 97 ಮಂದಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಆರೋಪಿಗಳನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ವಿಚಾರಣಾ ನ್ಯಾಯಾಲಯದ ತೀರ್ಪನ್ನು ಮಾಯಾ ಅವರು ಗುಜರಾತ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ನರೋಡಾ ಗಾಮ್ ಪ್ರಕರಣದ ವಿಚಾರಣೆಯನ್ನು 4 ತಿಂಗಳಿನೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಕಳೆದ ತಿಂಗಳು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿತ್ತು.
ಈ ಹತ್ಯಾಕಾಂಡ ನಡೆದ ವೇಳೆ ನಾನು ಆ ಸ್ಥಳದಲ್ಲಿ ಇರಲಿಲ್ಲ. ವಿಧಾನಸಭೆಯ ಅಧಿವೇಶನ ನಡೆದ ಬಳಿಕ ಸೋಲಾ ಆಸ್ಪತ್ರಗೆ ತೆರಳಿದ್ದೆ ಎಂದು ಮಾಯಾ ಕೊಡ್ನಾನಿ ನ್ಯಾಯಾಲಯದಲ್ಲಿ ಹೇಳಿದ್ದಾರೆ.