ಅಯೋಧ್ಯೆ: ರಾಮನೂರಿನಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ (Pran Prathistha Ceremony) ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಾವಿರಾರು ಜನರಿಗೆ ಈಗಾಗಲೇ ಆಹ್ವಾನ ಕಳುಹಿಸಲಾಗಿದೆ. ಹೀಗಾಗಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಇನ್ನೂ ಕೆಲವರು ಭಾಗವಹಿಸಲ್ಲ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್ ಹೈಕಮಾಂಡ್ (Congress High Command) ನಿರಾಕರಿಸಿದೆ. ಇದೀಗ ಅಖಿಲೇಶ್ ಯಾದವ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೋ, ಇಲ್ಲವೋ ಎಂಬ ಪ್ರಶ್ನೆಗೆ ಇದೀಗ ಸ್ವತಃ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಸಂಬಂಧ ಅಖಿಲೇಶ್ (Akhilesh Yadav) ಅವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಪತ್ರವನ್ನು ಬರೆದಿದ್ದಾರೆ. ಇದರಲ್ಲಿ ಕಾರ್ಯಕ್ರಮದ ನಂತರ ಬರುವುದಾಗಿ ಹೇಳಿದ್ದಾರೆ. ಜೊತೆಗೆ ಆಹ್ವಾನ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಕೂಡ ಅಲ್ಲಿಸಿದ್ದಾರೆ. ಇದರೊಂದಿಗೆ ಈ ಕಾರ್ಯಕ್ರಮವನ್ನು ಸುರಕ್ಷಿತವಾಗಿ ಪೂರ್ಣಗೊಳಿಸಬೇಕು. ಜನವರಿ 22 ರ ಕಾರ್ಯಕ್ರಮದ ಬಳಿಕ ತಮ್ಮ ಕುಟುಂಬದೊಂದಿಗೆ ಅಯೋಧ್ಯೆಗೆ ಭೇಟಿ ನೀಡುವುದಾಗಿಯೂ ಅಖಿಲೇಶ್ ತಿಳಿಸಿದ್ದಾರೆ.
ಆಹ್ವಾನ ಬಂದಿಲ್ಲವೆಂದು ಹೇಳಿದ್ದರು ಅಖಿಲೇಶ್: ಇದಕ್ಕೂ ಮುನ್ನ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ್ದ ಅಖಿಲೇಶ್ ಯಾದವ್, ತಮಗೆ ಆಹ್ವಾನ ಬಂದಿಲ್ಲ ಎಂದು ಹೇಳಿದ್ದರು. ಅಯೋಧ್ಯೆಯಲ್ಲಿ ನಡೆಯಲಿರುವ ರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ಅಥವಾ ಕೊರಿಯರ್ ಮೂಲಕ ಆಹ್ವಾನ ಬಂದಿಲ್ಲ. ಆಮಂತ್ರಣ ಪತ್ರವನ್ನು ಕೊರಿಯರ್ ಮೂಲಕ ಕಳುಹಿಸಿದ್ದರೆ ಅದರ ರಸೀದಿಯನ್ನು ಅವರಿಗೆ ತೋರಿಸಬೇಕು, ಆಮಂತ್ರಣವನ್ನು ಸರಿಯಾದ ವಿಳಾಸಕ್ಕೆ ಕಳುಹಿಸಲಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಬಹುದು ಎಂದು ಅವರು ಹೇಳಿದ್ದರು.