– ದೆಹಲಿಯಲ್ಲಿ ಸುರಕ್ಷಿತ ಲ್ಯಾಂಡಿಂಗ್
ನವದೆಹಲಿ: ಫುಕೆಟ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು (Air India Flight) ಮಂಗಳವಾರ ಮಧ್ಯಾಕಾಶದಲ್ಲಿ ತೀವ್ರ ಟರ್ಬುಲೆನ್ಸ್ಗೆ (ಪ್ರಕ್ಷುಬ್ಧತೆ) ಸಿಲುಕಿದ ಪರಿಣಾಮ ದಿಢೀರ್ 300 ಅಡಿ ಕುಸಿದು ಇಬ್ಬರು ಸಿಬ್ಬಂದಿ ಸೇರಿ ಒಟ್ಟು 12 ಮಂದಿ ಗಾಯಗೊಂಡಿದ್ದು, ವಿಮಾನಕ್ಕೂ ಸಣ್ಣ ಪ್ರಮಾಣದ ಹಾನಿಯಾಗಿದೆ.
AI2379 ವಿಮಾನವು ಬೆಳಿಗ್ಗೆ 8:25ಕ್ಕೆ ಫುಕೆಟ್ನಿಂದ ಹೊರಟಿದ್ದು, ಮಧ್ಯಾಹ್ನ 11:50ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ಹಾರಾಟದ ವೇಳೆ ವಿಮಾನವು ಏಕಾಏಕಿ ಸುಮಾರು 300 ಅಡಿ ಕುಸಿದಿದೆ. ಈ ಘಟನೆಗೆ ಕ್ಲಿಯರ್ ಏರ್ ಟರ್ಬುಲೆನ್ಸ್ (Turbulence) ಅಥವಾ ಅಪ್ಡ್ರಾಫ್ಟ್/ಡೌನ್ಡ್ರಾಫ್ಟ್ (ಗಾಳಿಯ ಮೇಲ್ಮುಖ ಹಾಗೂ ಕೆಳಮುಖ ಹರಿವು) ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಸನಾತನ ಧರ್ಮ ಟೀಕಿಸಿದ್ದ ವ್ಯಕ್ತಿಯ ಬಂಧನವಾಗಿದೆ – ಉದಯನಿಧಿ ಬಂಧನಕ್ಕೆ ಕುಟುಕಿದ ಅಮಿತ್ ಮಾಳವೀಯ
ಟರ್ಬುಲೆನ್ಸ್ನಿಂದ ಕೆಲ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದರೂ, ಯಾವುದೇ ಗಂಭೀರ ಗಾಯಗಳು ಸಂಭವಿಸಿಲ್ಲ ಎಂದು ಏರ್ ಇಂಡಿಯಾ ತಿಳಿಸಿದೆ. ವಿಮಾನವು ಸುರಕ್ಷಿತವಾಗಿ ಇಳಿದ ಬಳಿಕ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಯಾವುದೇ ತೊಂದರೆಯಿಲ್ಲದೆ ವಿಮಾನದಿಂದ ಹೊರಬಂದರು. ವೈದ್ಯಕೀಯ ತಪಾಸಣೆಯ ಅಗತ್ಯವಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ತಕ್ಷಣವೇ ವಿಮಾನ ನಿಲ್ದಾಣದ ಅಂಬುಲೆನ್ಸ್ ಹಾಗೂ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಪರೀಕ್ಷೆ ನಡೆಸಲಾಗಿದೆ. ಇದನ್ನೂ ಓದಿ: 34 ಸಾವಿರ ಕೋಟಿ ಗಳಿಸಲು ಸರ್ಕಾರ ಸಂಚು – ಹೈಕೋರ್ಟ್ಗೆ ಬಿಡದಿ ರೈತರ ವಾದ
ಏರ್ ಇಂಡಿಯಾ ಪ್ರಕಟಣೆಯಲ್ಲಿ, ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ಸಂಸ್ಥೆಯ ಮೊದಲ ಆದ್ಯತೆಯಾಗಿದ್ದು, ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ನೀಡಲಾಗಿದೆ ಎಂದು ತಿಳಿಸಿದೆ. ವಿಮಾನದಲ್ಲಿ ಉಂಟಾದ ಈ ಟರ್ಬುಲೆನ್ಸ್ ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ 7-8 ವರ್ಷಗಳಿಂದ ಉಪಾಧ್ಯಕ್ಷರನ್ನ ನೇಮಿಸಿಲ್ಲ ಯಾಕೆ: ಬಿಜೆಪಿಗರಿಗೆ ಪ್ರಿಯಾಂಕ್ ತಿರುಗೇಟು
ಆದರೆ, ವಿಮಾನವು ಯಾವುದೇ ಅಪಾಯವಿಲ್ಲದೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದು, ಎಲ್ಲಾ 134 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ವಿಮಾನದಿಂದ ಇಳಿದಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಶಾಸಕ ಎನ್ವೈ ಗೋಪಾಲಕೃಷ್ಣಗೆ ತಪ್ಪಿದ ಮಂತ್ರಿಗಿರಿ – ಟೈರಿಗೆ ಬೆಂಕಿಯಿಟ್ಟು ಬೆಂಬಲಿಗರ ಆಕ್ರೋಶ
ಘಟನೆಯ ವೇಳೆ ಗಂಭೀರ ಗಾಯಗಳಾಗಿಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ. ಸಣ್ಣಪುಟ್ಟ ಗಾಯಗಳಾಗಿರುವ ಕೆಲ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ; ಕಾಂಗ್ರೆಸ್ ನನಗೆ ದೇವಾಲಯ ಇದ್ದಂತೆ: ಪ್ರದೀಪ್ ಈಶ್ವರ್
