ಬೆಂಗಳೂರು: ಸಭಾಪತಿ ಹೊರಟ್ಟಿ ಅವರು ಹಿರಿಯರು. ಅವರ ಬಳಿ ನಮ್ಮ ವರಿಷ್ಠರು ಮಾತನಾಡಿ ಎಲ್ಲವನ್ನೂ ಬಗೆಹರಿಸುತ್ತಾರೆ ಎಂದು ಗೃಹ ಸಚಿವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಸಭಾಪತಿ, ಸ್ಪೀಕರ್ ಸ್ಥಾನಕ್ಕೆ ಎಐಸಿಸಿ (AICC) ಲೆಟರ್ ಹೆಡ್ನಲ್ಲಿ ಹೆಸರು ಕಳುಹಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಅದು ಆಂತರಿಕ ಸಂವಹನ ಪ್ರಕ್ರಿಯೆ. ಅದನ್ನೇನು ಸರ್ಕಾರಕ್ಕೆ ಕೊಡ್ತಾ ಇದ್ದೀವಾ? ಬಿಜೆಪಿ ಅವರು ಸಭಾಪತಿ, ಉಪಸಭಾಪತಿ ಬಗ್ಗೆ ಮಾತನಾಡುತ್ತಿದ್ದಾರೆ. ಲೋಕಸಭೆಯಲ್ಲಿ ಕಳೆದ 7-8 ವರ್ಷಗಳಿಂದ ಉಪಾಧ್ಯಕ್ಷರನ್ನು ಬಿಜೆಪಿ ನೇಮಕ ಮಾಡಿಲ್ಲ. ಯಾಕೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು.
ಭಾರತದ ಇತಿಹಾಸದಲ್ಲಿ ಎಂದಿಗೂ ಆ ಸ್ಥಾನವನ್ನು ಖಾಲಿ ಇಟ್ಟಿರಲಿಲ್ಲ. ಬಿಜೆಪಿ(BJP) ಅವರು ಗೌರವ ಕೊಡುತ್ತಾರಾ? ನಿನ್ನೆ ರಾಷ್ಟ್ರೀಯ ಅಧ್ಯಕ್ಷರ ಕ್ಷೇತ್ರದಲ್ಲಿ ಸೋತು ಇವರಿಗೆ ಮುಖಭಂಗವಾಗಿದೆ. ಅದನ್ನು ಮುಚ್ಚಿಟ್ಟುಕೊಳ್ಳಲು ನಮ್ಮ ಕ್ಯಾಬಿನೆಟ್ ಬಗ್ಗೆ ಚರ್ಚೆ, ಡಿ.ಕೆ. ಶಿವಕುಮಾರ್(DK Shivakumar) ಬಗ್ಗೆ, ಸಿದ್ದರಾಮಯ್ಯ ಅವರ ಬಗ್ಗೆ ಚರ್ಚೆ, ಯಾರು ಯಾವ ಬಟ್ಟೆ ಹಾಕಿದ್ದಾರೆ ಎಂದು ಚರ್ಚೆ ಮಾಡುತ್ತಾರೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಬಿಜೆಪಿ ಅಧ್ಯಕ್ಷರ ಕ್ಷೇತ್ರದ ಹೀನಾಯ ಸೋಲು ಅವರಿಗೆ ಮುಜುಗರ ತಂದಿದೆ. ಇದನ್ನು ಮುಚ್ಚಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಭಾಪತಿ ಹೊರಟ್ಟಿ ರಾಜೀನಾಮೆ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದೆಲ್ಲವನ್ನೂ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸಭಾಪತಿ ಆಯ್ಕೆಗೆ ತನ್ನದೇ ಆದ ಪ್ರಕ್ರಿಯೆ ಇದೆ. ಅದನ್ನು ವರಿಷ್ಠರು ಕುಳಿತು ಮಾತನಾಡುತ್ತಾರೆ. ಹೊರಟ್ಟಿ ಅವರು ಯಾರಿಗೂ ಹೊಸಬರಲ್ಲ. ಅವರ ಹಿರಿತನಕ್ಕೆ ಗೌರವ ನೀಡಿ ಮಾತುಕತೆ ನಡೆಸುತ್ತಾರೆ, ಸಮಸ್ಯೆ ಬಗೆಹರಿಸುತ್ತಾರೆ. ಬಿಜೆಪಿಯವರಿಗೆ ಈ ಬಗ್ಗೆ ಸಮಸ್ಯೆ ಇರಬೇಕು ಅಷ್ಟೇ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಎಸ್ಆರ್ ಶ್ರೀನಿವಾಸ್ ಬೇಸರ – KSRTC ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಉಂಟಾಗಿರುವ ಬಗ್ಗೆ ಕೇಳಿದ್ದಕ್ಕೆ, 140 ಶಾಸಕರು ಇದ್ದಾಗ ಹಾಗೂ 20 ಸಚಿವ ಸ್ಥಾನಗಳು ಮಾತ್ರ ಲಭ್ಯವಿದ್ದಾಗ ಎಲ್ಲರಿಗೂ ನ್ಯಾಯ ಒದಗಿಸುವುದು ಕಷ್ಟವಾಗುತ್ತದೆ. ಆದರೂ ಕೂಡ ಹೈಕಮಾಂಡ್, ಸಿಎಂ, ಮಾಜಿ ಸಿಎಂ ಅವರು ಪ್ರಾಮಾಣಿಕ ಪ್ರಯತ್ನ ಮಾಡಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಮಾಡುವುದು ಕಷ್ಟವಾಗುತ್ತದೆ ಎಂದರು.
ನಾವು ಪ್ರತಿದಿನ ದೇವರ ಹತ್ತಿರ ಬೇಡಿಕೊಳ್ಳುತ್ತೇವೆ, ಎಲ್ಲವೂ ನೆರವೇರುತ್ತದೆಯೇ? ಆದರೂ ಕೂಡ ನಂಬಿಕೆಯಿಂದ ಹೋಗುತ್ತೇವೆ. ಸಿಎಂ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅವರು ನಡೆದು ಬಂದ ಹಾದಿಯಲ್ಲೂ ಸಾಕಷ್ಟು ಬಾರಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ, ತಾಳ್ಮೆಯಿಂದ ಇರಬೇಕು ಎಂದು ಹೇಳಿದ್ದಾರೆ. ವೀರೇಂದ್ರ ಪಾಟೀಲ್ ಅವರು ಸಿಎಂ ಆಗಿದ್ದಾಗ ಧರ್ಮಸಿಂಗ್ ಹಾಗೂ ಖರ್ಗೆ ಅವರನ್ನು ಹೊರಗೆ ಇಟ್ಟಿದ್ದರು. ಇವೆಲ್ಲವೂ ರಾಜಕೀಯದಲ್ಲಿ ಸಹಜ. ಇದರ ಬಗ್ಗೆ ವರಿಷ್ಠರು ಚರ್ಚೆ ಮಾಡಿದ್ದಾರೆ. ಎಲ್ಲರ ಮನವೊಲಿಸುವ ಪ್ರಯತ್ನ ನಡೆದಿದೆ. ಯಾವುದೇ ಅನುಮಾನವಿಲ್ಲ, ನಮ್ಮ ಶಾಸಕರು ಪಕ್ಷದ ತೀರ್ಮಾನಕ್ಕೆ ಗೌರವ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಸಮಾಧಾನದಿಂದ ಶಾಸಕರು ರಾಜೀನಾಮೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಎಲ್ಲರಿಗೂ ಸ್ವಲ್ಪ ಮನನೊಂದಿರಬಹುದು. ಅವರ ಸಮಾಜದವರು ಹಾಗೂ ಕ್ಷೇತ್ರದ ಜನರ ಒತ್ತಡ ಇದ್ದೇ ಇರುತ್ತದೆ. ಎಲ್ಲರೂ ತಮ್ಮ ನಾಯಕರು ಒಳ್ಳೆಯ ಸ್ಥಾನಕ್ಕೆ ಹೋಗಬೇಕು ಎಂದು ಬಯಸುತ್ತಾರೆ. ಹಾಗಾಗಿ ಅವರಿಗೆ ನೋವಾಗಿರುವುದು ಸಹಜ. ಅವರಿಗೆ ಸಮಾಧಾನ ಪಡಿಸುವ ಪ್ರಯತ್ನ ಮಾಡೋಣ ಎಂದರು.
