ಕನ್ನಡದ ನಟಿ ದಿವ್ಯಾ ಶ್ರೀಧರ್ (Divya Shridhar) ಹಾಗೂ ಅಮ್ಜಾದ್ ಖಾನ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಈ ಸುದ್ದಿಯಿಂದ ಸ್ವತಃ ದಿವ್ಯಾ ಶಾಕ್ ಆಗಿದ್ದಾರೆ. ಸದ್ಯ ಅಮ್ಜಾದ್ ಖಾನ್ ಜೈಲಿನಲ್ಲಿದ್ದು, ಈ ಸಂದರ್ಭದಲ್ಲಿ ಅವರಿಗೆ ಮಂಗಳಮುಖಿ ಜೊತೆ ಸಂಬಂಧ ಇತ್ತು ಎನ್ನುವ ಆಡಿಯೋ ವೈರಲ್ ಆಗಿದೆ. ಸಂಬಂಧ ಇತ್ತು ಎಂದು ಸ್ವತಃ ಆ ಮಂಗಳಮುಖಿಯೇ ಹೇಳಿರುವ ಆಡಿಯೋ (Audio) ಅದಾಗಿದೆ. ಅಲ್ಲದೇ, ಮಂಗಳಮುಖಿ ಜೊತೆ ಅಮ್ಜಾದ್ ಇರುವಂತಹ ಫೋಟೋಗಳು ಕೂಡ ಹರಿದಾಡುತ್ತಿವೆ.
ಪ್ರಿಯದರ್ಶಿನಿ (Priyadarshini) ಹೆಸರಿನ ಈ ಮಂಗಳಮುಖಿ ಸದ್ಯ ಇರುವುದು ಮಲೇಶಿಯಾದಲ್ಲಿ. ಈಕೆಯ ಜೊತೆಯೇ ಅಮ್ಜಾದ್ ಗೆ ಸಂಬಂಧವಿತ್ತು ಎಂದು ಆ ಆಡಿಯೋದಲ್ಲಿ ಹೇಳಲಾಗಿದೆ. ‘ಅವನು ನನ್ನನ್ನು ಪ್ರೀತಿಸಿದ. ಆನಂತರ ಗೊತ್ತಾಯಿತು ಅವನೊಬ್ಬ ಹೆಣ್ಣುಬಾಕಾ ಅಂತ. ಚೆನ್ನೈನಲ್ಲಿ ಅವನು ನನ್ನ ಜೊತೆ ಸಹ ಜೀವನ ನಡೆಸಿದ್ದಾನೆ. ಅಲ್ಲದೇ, ವಿವಾಹ ಕೂಡ ಆಗಿದ್ದ. ಎರಡು ವರ್ಷ ಒಟ್ಟಿಗೆ ಇದ್ದೆವು. ಆಮೇಲೆ ನನ್ನನ್ನು ಅವನು ದೂರ ಮಾಡಿದ. ನಾನು ನೋವು ತಾಳಲಾರದೆ ಮಲೇಶಿಯಾಗೆ ಹೊರಟೆ’ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್
ಈ ಆಡಿಯೋ ಇದೀಗ ಸಖತ್ ವೈರಲ್ ಆಗಿದೆ. ಅಮ್ಜಾದ್ ಸದ್ಯ ಜೈಲಿನಲ್ಲಿ ಇರುವುದರಿಂದ ಈ ಆಡಿಯೋ ಅವರ ಜೀವನಕ್ಕೆ ಯಾವೆಲ್ಲ ರೀತಿಯಲ್ಲಿ ತೊಂದರೆ ತಂದು ಇಡಲಿದೆ ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆ. ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಸ್ವತಃ ದಿವ್ಯಾ ಶ್ರೀಧರ್ ಅವರೇ ಶಾಕ್ ಗೆ ಒಳಗಾಗಿದ್ದು, ಆ ಹುಡುಗಿ ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನ ಕೂಡ ಮಾಡಿಕೊಳ್ಳುತ್ತಿದ್ದಾರಂತೆ.
ಪತಿ ಮೇಲೆ ಸ್ವತಃ ದಿವ್ಯಾ ಶ್ರೀಧರ್ ಅವರೇ ದೂರು ನೀಡಿದ್ದರು. ಅಮ್ಜಾದ್ (Amjad Khan) ಬಂಧನಕ್ಕೂ ಮುನ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಹಿಳಾ ಆಯೋಗ ಕೂಡ ಪ್ರವೇಶ ಮಾಡಿತ್ತು. ಕರ್ನಾಟಕದ ನಟಿ ದಿವ್ಯಾ ಶ್ರೀಧರ್ ಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆಗ್ರಹಿಸಿ, ಈ ಕುರಿತಂತೆ ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿ ಮೂಲಕವೂ ಮಾತನಾಡಿದ್ದರು.
ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿಯಲ್ಲಿ ಮಾತನಾಡುವುದರ ಜೊತೆಗೆ ಲಿಖಿತ ರೂಪದಲ್ಲೂ ಆಯೋಗಕ್ಕೆ ಪತ್ರ ಬರೆದು, ದಿವ್ಯಾಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರಂತೆ. ದಿವ್ಯಾ ಶ್ರೀಧರ್ ತನ್ನ ಗಂಡನಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು. ಗರ್ಭಿಣಿ ಅನ್ನುವುದನ್ನೂ ನೋಡದೇ ಆಕೆಯ ಪತಿಯು ಹೊಟ್ಟೆಗೆ ಒದ್ದಿರುವ ಕುರಿತು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಸ್ಯಾಂಡಲ್ ವುಡ್ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ದಿವ್ಯಾ ಶ್ರೀಧರ್, ಆನಂತರ ಕಿರುತೆರೆ ಜಗತ್ತಿಗೆ ಕಾಲಿಟ್ಟರು. ಸಿನಿಮಾ ರಂಗದಲ್ಲಿ ಅಷ್ಟೇನೂ ಮಿಂಚದೇ ಇದ್ದರೂ, ಆಕಾಶ ದೀಪ ಧಾರಾವಾಹಿ ಮೂಲಕ ಸಖತ್ ಫೇಮಸ್ ಆದರು. ಈ ಧಾರಾವಾಹಿಯ ಯಶಸ್ಸು ಅವರನ್ನು ತಮಿಳು ಕಿರುತೆರೆ ಜಗತ್ತಿಗೂ ಕಾಲಿಡುವಂತೆ ಮಾಡಿತು. ತಮಿಳು ಧಾರಾವಾಹಿಯಲ್ಲೂ ದಿವ್ಯಾ ಸಾಕಷ್ಟು ಹೆಸರು ಮಾಡಿದರು.
ತಮಿಳು ಧಾರಾವಾಹಿಯ ಸಂದರ್ಭದಲ್ಲೇ ನಟ ಅನರ್ವ್ ಅಲಿಯಾಸ್ ಅಮ್ಜದ್ ಖಾನ್ ಜೊತೆ ಸ್ನೇಹ ಬೆಳೆದು, ಅದು ಪ್ರೀತಿಗೂ ತಿರುಗಿ ನಂತರ ಮದುವೆಯಾಗಿದ್ದಾರೆ. ದಿವ್ಯಾ ಪ್ರಗ್ನೆಂಟ್ ಎಂದು ತಿಳಿಯುತ್ತಿದ್ದಂತೆಯೇ ಪತಿ ಅವರಿಂದ ದೂರವಾಗುವುದಕ್ಕೆ ಶುರು ಮಾಡಿದರು ಎಂದು ಆರೋಪಿಸಿದ್ದಾರೆ ದಿವ್ಯಾ. ಅಲ್ಲದೇ, ತಮಗೆ ಪತಿಯಿಂದ ದೈಹಿಕ ಹಿಂಸೆ ಸೇರಿದಂತೆ ಹಲವು ಆರೋಪಗಳನ್ನು ದಿವ್ಯಾ ಮಾಡಿದ್ದಾರೆ.