ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ (Ranbir Kapoor) ಸೇರಿದಂತೆ ಹಲವರಿಗೆ ಇಡಿ (ಜಾರಿ ನಿರ್ದೇಶನಾಲಯ) (Enforcement Directorate) ನೋಟಿಸ್ ಜಾರಿ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಣಬೀರ್ ಕಪೂರ್ ಇಡಿ ಅಧಿಕಾರಿಗಳ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉದ್ಯಮಿ ಸೌರಬ್ ಚಂದ್ರಶೇಖರ್ ಅವರ ದುಬಾರಿ ಮದುವೆ ಪಾರ್ಟಿಯಲ್ಲಿ ಹಲವು ಸಿಲೆಬ್ರಿಟಿಗಳು ಭಾಗಿಯಾಗಿದ್ದರು. ಈ ಮದುವೆಯ ಪಾರ್ಟಿಯಲ್ಲಿ ಭಾಗಿಯಾಗುವುದಕ್ಕಾಗಿಯೇ ಹಣ ಪಡೆದಿದ್ದರು. ಇವರಿಗೆಲ್ಲ ನೀಡಿದ ಹಣವು ಮಹದೇವ ಬೆಟ್ಟಿಂಗ್ ಆಪ್ ನಿಂದ ಬಂದಿದ್ದಾಗಿದೆ. ಈ ಆಪ್ ನಲ್ಲಿ ಹವಾಲ ಹಣ ಹೂಡಿಕೆ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಹಾಗಾಗಿ ಹಣ ಪಡೆದವರಿಗೆ ನೋಟಿಸ್ ನೀಡಿ ವಿಚಾರಣೆ ಕರೆಯಲಾಗುತ್ತಿದೆ.
ಬಾಲಿವುಡ್ ನ ಅನೇಕ ನಟ ನಟಿಯರು ಈ ಆಪ್ ನಲ್ಲಿ ಪರೋಕ್ಷವಾಗಿ ಹಣ ಹೂಡಿದ್ದಾರೆ ಎನ್ನುವ ಮಾಹಿತಿಯೂ ಇದೆ. ಕೆಲವರು ಇದರ ಜಾಹೀರಾತಿನಲ್ಲೂ ಭಾಗಿಯಾಗಿದ್ದಾರೆ. ಅಲ್ಲದೇ, ಆಪ್ ಪ್ರಚಾರದಲ್ಲೂ ತೊಡಗಿಕೊಂಡಿದ್ದಾರೆ. ಈ ಆಪ್ ಜೊತೆ ಗುರುತಿಸಿಕೊಂಡ ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ. ರಣಬೀರ್ ಕಪೂರ್ ಜೊತೆ ಇನ್ನೂ ಒಂಬತ್ತು ಜನ ಸಿಲಿಬ್ರಿಟಿಗಳಿಗೂ ನೋಟಿಸ್ ನೀಡಲಾಗಿದೆ.
ಏನಿದು ಪ್ರಕರಣ?
ಮಹದೇವ್ ಬೆಟ್ಟಿಂಗ್ ಆಪ್ನ ಮುಖ್ಯಸ್ಥನ ಸೌರಭ್ ಚಂದ್ರಕರ್ ಅವರ ಮದುವೆ ಅದ್ಧೂರಿಯಾಗಿ ದುಬೈನಲ್ಲಿ ನಡೆದಿತ್ತು. ಮುಂಬೈ ಮೂಲದ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಮದುವೆಯ ಉಸ್ತುವಾರಿ ನೀಡಿತ್ತು. ಈ ಇವೆಂಟ್ ಮ್ಯಾನೇಜ್ ಮೆಂಟ್ ಹಲವಾರು ಸಿಲಿಬ್ರಿಟಿಗಳನ್ನು ಮದುವೆಗೆ ಆಹ್ವಾನ ನೀಡಿತ್ತು. ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಸೌರಭ್ 140 ಕೋಟಿ ರೂಪಾಯಿ ಹವಾಲ ಹಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಿಲಿಬ್ರಿಟಿಗಳಿಗೂ ಈ ಹಣ ಪಾವತಿ ಆಗಿರುವುದರಿಂದ ಹಣ ಪಡೆದವರಿಗೆ ನೋಟಿಸ್ ನೀಡಿ, ವಿಚಾರಣೆ ಮಾಡಲಾಗುತ್ತಿದೆ. ಒಟ್ಟು ಈ ಮದುವೆಗೆ 200 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಇಡಿ ತನಿಖೆಯಿಂದ ತಿಳಿದು ಬಂದಿದೆ. ಇದಷ್ಟೇ ಅಲ್ಲ, ಈ ಆಪ್ ಅನ್ನು ಪ್ರಮೋಟ್ ಮಾಡಿದ 100ಕ್ಕೂ ಹೆಚ್ಚು ಜನರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.
Web Stories