ಬಳ್ಳಾರಿ: ಬೆಂಕಿ ಆರಿಸೋದು ಅಗ್ನಿಶಾಮಕ ದಳದ ಸಿಬ್ಬಂದಿ ಕೆಲಸ. ಅದು ಎಲ್ಲರಿಗೂ ಗೊತ್ತಿದೆ. ಆದರೆ ಇಂಥ ಬೆಂಕಿ ನಂದಿರೋ ಕೈಗಳು ಪರಿಸರ ರಕ್ಷಣೆಗೆ ಮುಂದಾಗಿ ತಮ್ಮ ಕಚೇರಿ ಆವರಣದಲ್ಲೇ ಒಂದು ಮಿನಿ ಫಾರೆಸ್ಟ್ ನಿರ್ಮಿಸಿದ್ದಾರೆ. ಬಳ್ಳಾರಿ ಕೂಡ್ಲಗಿಯ ಅಗ್ನಿಶಾಮಕ ಸಿಬ್ಬಂದಿ ಮಾಡಿರೋ ಈ ಕಾರ್ಯ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
ಬಳ್ಳಾರಿಯ ಕೂಡ್ಲಗಿ ಅಗ್ನಿಶಾಮಕ ಠಾಣೆಯ ಎದುರಿರೋ ಜಮೀನನನ್ನು ಮಿನಿ ಫಾರೆಸ್ಟ್ ಎಂದು ಯಾಕೆ ಹೇಳ್ತಿದ್ದೀವಿ ಅಂದ್ರೆ ಈ ಆವರಣದಲ್ಲಿ ಎಲ್ಲಾ ರೀತಿಯ ಮರಗಳು, ಹೂ-ಗಿಡಗಳಿವೆ. ಬೆಂಕಿ ನಂದಿಸೋ ಕಾರ್ಯಕ್ಕಾಗಿ ದಿನದ 24 ಗಂಟೆಯೂ ಸನ್ನದ್ಧವಾಗಿರೋ ಈ ಠಾಣೆಯ ಅಗ್ನಿಶಾಮಕ ಸಿಬ್ಬಂದಿ, ತಮ್ಮ ಬಿಡುವಿನ ವೇಳೆ ಆವರಣದಲ್ಲೇ ಸಸಿ ನೆಡುವ ಮೂಲಕ ಕೃತಕ ಕಾಡನ್ನ ನಿರ್ಮಿಸಿದ್ದಾರೆ.
ಕೂಡ್ಲಗಿ ಪಟ್ಟಣದ ಹೊರವಲಯದಲ್ಲಿರುವ ಎರಡೂವರೆ ಎಕರೆ ಜಮೀನಿನಲ್ಲಿ 65 ಮಾವಿನ ಮರ, 80 ತೆಂಗಿನ ಮರ, 50 ಸಪೋಟಾ, 50 ಸೀತಾಫಲ, ನೆರಳೆ, ತೇಗ, ಬೇವು, ಅಂಜೂರ, ನೆಲ್ಲಿ, ನಿಂಬಿಕಾಯಿ, ರಕ್ತಚಂದನ, ಸೇರಿದಂತೆ ಬಗೆ ಬಗೆಯ ಹೂ-ಹಣ್ಣಿನ ಗಿಡ ಮರಗಳನ್ನ ನೆಟ್ಟು ಪೋಷಿಸುತ್ತಿದ್ದಾರೆ. ಕಳೆದ 6 ವರ್ಷಗಳಿಂದ ಈ ಕಾರ್ಯ ನಿರಂತರವಾಗಿ ಸಾಗಿದೆ.
ರಾಜಕೀಯ ಸುದ್ದಿಯಿಂದಲೇ ಸುದ್ದಿಯಾಗೋ ಬಳ್ಳಾರಿ, ಕೂಡ್ಲಗಿಯಲ್ಲಿ ಅರಣ್ಯ ಇಲಾಖೆ ಮಾಡಬೇಕಾದ ಕಾರ್ಯವನ್ನು ಅಗ್ನಿಶಾಮಕದಳದ ಸಿಬ್ಬಂದಿ ಮಾಡುತ್ತಿರೋದು ಶ್ಲಾಘನಾರ್ಹವೇ ಸರಿ.