ದಾವಣಗೆರೆ: 50ಕ್ಕೂ ಹೆಚ್ಚು ಜನರನ್ನು ಹೊತ್ತು ಭೋರ್ಗರೆಯುವ ಹಳ್ಳ ದಾಟುತ್ತಿದ್ದ ವೇಳೆ ಅದರಲ್ಲಿ ಲಾರಿಯೊಂದು (Lorry) ಸಿಲುಕಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ-ಚಿರಡೋಣಿ ನಡುವೆ ನಡೆದಿದೆ. ಲಾರಿಯಲ್ಲಿದ್ದ ಜನರನ್ನು ಬಳಿಕ ರಕ್ಷಿಸಲಾಗಿದ್ದು, ದೊಡ್ಡ ದುರಂತವೊಂದು ತಪ್ಪಿದೆ.
ಜನರನ್ನು ಹೊತ್ತು ಹಳ್ಳ ದಾಟುತ್ತಿದ್ದ ವೇಳೆ ಲಾರಿ ಹಠಾತ್ತನೆ ಹಳ್ಳದ ನಡುವೆ ಸಿಲುಕಿಕೊಂಡಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಹಳ್ಳದಲ್ಲಿ ಸಿಲುಕಿದ ಲಾರಿಯಲ್ಲಿ 50ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಸ್ವಲ್ಪ ಯಾಮಾರಿದರೂ ಭೋರ್ಗರೆಯುವ ಹಳ್ಳದಲ್ಲಿ 50 ಕ್ಕೂ ಹೆಚ್ಚು ಜನರು ಕೊಚ್ಚಿ ಹೋಗುತ್ತಿದ್ದರು. ಇದನ್ನೂ ಓದಿ: ಮತ್ತೆ 40% ಸದ್ದು- ಗುತ್ತಿಗೆದಾರನಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ
ಜನರನ್ನು ಹೊತ್ತು ಸಾಗುತ್ತಿದ್ದ ಲಾರಿಯ ಒಂದು ಭಾಗ ಹಳ್ಳದಲ್ಲಿ ಕುಸಿದು ಸಿಲುಕಿಕೊಂಡಿತ್ತು. ತಕ್ಷಣ ತಡಮಾಡದ ಸ್ಥಳೀಯರು ಲಾರಿಯಲ್ಲಿದ್ದವರ ರಕ್ಷಣೆಗೆ ಧಾವಿಸಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಪ್ರಯಾಣಿಕರ ಪ್ರಾಣ ಉಳಿದಿದೆ. ಇದನ್ನೂ ಓದಿ: ಅಂಬುಲೆನ್ಸ್ನ ಡೀಸೆಲ್ ಖಾಲಿ – ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
ಕಳೆದ ವರ್ಷ ಇದೇ ಹಳ್ಳದಲ್ಲಿ ಪಡಿತರ ಲಾರಿ ಸಿಲುಕಿ ಪಡಿತರ ಧಾನ್ಯಗಳು ನೀರುಪಾಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆಯೂ ಇದೇ ಹಳ್ಳದಲ್ಲಿ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇಷ್ಟೆಲ್ಲಾ ದುರ್ಘಟನೆಗಳು ನಡೆದಿದ್ದರಿಂದ ಗ್ರಾಮಸ್ಥರು ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಆಗ್ರಹಿಸಿದ್ದರು. ಆದರೆ ಈ ಭಾಗದ ಜನಪ್ರತಿನಿಧಿಗಳು ಕ್ಯಾರೆ ಎನ್ನದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.