ದೇಶ ವಿದೇಶಗಳಲ್ಲಿ ಕಾಂತಾರ (Kantara) ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಗೆಲುವಿನ ಬೆನ್ನಲ್ಲೇ ಕಾಂತಾರ ಸಿಕ್ವೆಲ್ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಸಿನಿಮಾದ ಕೊನೆಯಲ್ಲಿ ಸಿಕ್ವೆಲ್ (Sequel) ಬಗ್ಗೆ ನಿರ್ದೇಶಕ ರಿಷಬ್ ಶೆಟ್ಟಿ ಸಣ್ಣದೊಂದು ಸುಳಿವು ಕೂಡ ಕೊಟ್ಟಿದ್ದರಿಂದ ಪಾರ್ಟ್ 2 ಬರುತ್ತಾ? ಬರಲ್ಲವಾ? ಎನ್ನುವ ಪ್ರಶ್ನೆ ಮೂಡಿತ್ತು. ಕೊನೆಗೂ ರಿಷಬ್ ಶೆಟ್ಟಿ (Rishabh Shetty) ಈ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಾಂತಾರ ಸಿನಿಮಾ ಬಹುತೇಕ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ರಿಪೀಟ್ ಆಡಿಯನ್ಸ್ ಬರುತ್ತಿದ್ದಾರೆ. ಹಾಗಾಗಿ ಪಾರ್ಟ್ 2 ಕುರಿತು ಸದ್ಯಕ್ಕೆ ಏನೂ ಹೇಳಲಾರೆ. ‘ನೋ ಕಾಮೆಂಟ್ಸ್’ ಎಂದು ಹೇಳುವ ಮೂಲಕ ಕುತೂಹಲ ಉಳಿಸಿದ್ದಾರೆ. ಸದ್ಯ ಏನೂ ಹೇಳಲಾರೆ ಎನ್ನುವ ಅವರ ಮಾತು ಸಿಕ್ವೆಲ್ ಸಿನಿಮಾದ ಮುನ್ಸೂಚನೆಯನ್ನಂತೂ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸ್ಪಷ್ಟ ಉತ್ತರ ಸಿಗಬಹುದು.
ದೇಶಾದ್ಯಂತ ಕಾಂತಾರ ಸಿನಿಮಾ ಗೆಲುವಿನ ಓಟವನ್ನು ಮುಂದುವರೆಸಿದೆ. ದೀಪಾವಳಿ ಹಬ್ಬದ ರಜೆಯ ಕಾರಣದಿಂದಾಗಿ ಬಾಕ್ಸ್ ಆಫೀಸ್ ಭರ್ತಿ ಭರ್ತಿ ಆಗುತ್ತಿದೆ. ಇದೊಂದು ಐತಿಹಾಸಿಕ, ಮಹಾ ಗೆಲುವು ಎಂದು ಬಣ್ಣಿಸಲಾಗುತ್ತಿದೆ. ಈ ಗೆಲುವನ್ನು ರಿಷಬ್ ಶೆಟ್ಟಿ ದೈವಕ್ಕೆ ಅರ್ಪಿಸಿದ್ದಾರೆ. ಈ ಸಿನಿಮಾ ಗೆಲ್ಲಲು ದೈವ ಕಾರಣ, ಜನರಲ್ಲಿ ನಾನು ದೇವರನ್ನು ಕಾಣುತ್ತೇನೆ ಎಂದು ಹೇಳಿದ್ದಾರೆ ರಿಷಬ್. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ
ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿ ಕನ್ನಡಿಗರ ಮನೆಮಾತಾಗಿರುವ ಹೆಮ್ಮೆಯ ‘ಹೊಂಬಾಳೆ ಫಿಲಮ್ಸ್ (Hombale Films)‘ , ಚಿತ್ರರಸಿಕರ ನಿರೀಕ್ಷೆಯಂತೆ ಸತತವಾಗಿ ಯಶಸ್ವಿ ಚಿತ್ರಗಳನ್ನು ದೇಶದ ಚಲನಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಮೆಚ್ಚುಗೆ ಗಳಿಸಿದೆ. ‘ಕಾಂತಾರ’ ದೇಶ-ವಿದೇಶಗಳಲ್ಲಿ ಜನಮೆಚ್ಚುಗೆ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಇದೀಗ ಕಾಂತಾರ ಬಿಡುಗಡೆಯಾದ ಇಪ್ಪತ್ತೈದು ದಿನಕ್ಕೆ ಹೊಸ ದಾಖಲೆಯೊಂದನ್ನು ನಿರ್ಮಿಸಿರುವುದು ಹೊಂಬಾಳೆ ಫಿಲಮ್ಸ್ ಯಶಸ್ಸಿನ ಮುಕುಟಕ್ಕೆ ಹೊಸ ಗರಿ ಮೂಡಿದೆ.
ಈವರೆಗೆ ಹೊಂಬಾಳೆ ಬ್ಯಾನರ್ ನಲ್ಲಿ ನಿರ್ಮಿಸಿದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ಸಿನಿಮಾಪ್ರಿಯರು ಕಾಂತಾರ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ.