ಶಿವಮೊಗ್ಗ: ಕೆ.ಎಸ್. ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ಇತರೆ ಸ್ವಾಮೀಜಿಗಳು ಭೇಟಿ ನೀಡಿ ಚರ್ಚೆ ನಡೆಸಿದರು.
ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಪ್ರತಿ ಹುಣ್ಣಿಮೆಯ ದಿನ ಮನೆಯಲ್ಲಿ ವಿಶೇಷ ಪೂಜೆ ಇರುತ್ತದೆ. ಇವತ್ತು ಸಹ ಹುಣ್ಣಿಮೆ ಪೂಜೆ ಜೊತೆಗೆ ಸತ್ಯನಾರಾಯಣ ಪೂಜೆ ಮಾಡುತ್ತಿದ್ದೆವು. ಇದೇ ವೇಳೆ 10ಕ್ಕೂ ಹೆಚ್ಚು ಶ್ರೀಗಳು ನಮ್ಮ ಮನೆಗೆ ಭೇಟಿ ಕೊಟ್ಟಿದ್ದಾರೆ. ಅವರು ಬರುವ ಕಲ್ಪನೆ ಸಹ ನನಗೆ ಇರಲಿಲ್ಲ. ಪೂಜೆಯ ಸಮಯಕ್ಕೆ ದೇವರ ರೀತಿ ಬಂದು ಅವರೆಲ್ಲರೂ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.
ಯಾವ ಲೋಪವೂ ಇಲ್ಲದೇ, ನಿರ್ದೋಷಿಯಾಗಿ ಹೊರಗೆ ಬರ್ತೀರಾ ಎಂದು ಸ್ವಾಮೀಜಿಗಳು ಅಭಯ ನೀಡಿದ್ದಾರೆ. ನಾನೇನು ಕುಗ್ಗಿರಲಿಲ್ಲ. ನನಗೆ ಆನೆಬಲದಷ್ಟು ಧೈರ್ಯ ಬಂದಿದೆ. ಎಲ್ಲಾ ಶ್ರೀಗಳು ಆಶೀರ್ವಾದ ಮಾಡಿದ್ದು, ನನಗೆ ಪೂರ್ವ ಜನ್ಮದ ಪುಣ್ಯವಾಗಿದೆ. ಜೊತೆಗೆ ಮಂತ್ರಾಲಯದ ಶ್ರೀಗಳು ಕರೆ ಮಾಡಿದ್ದರು. ರಾಯರ ಭಕ್ತರು ನೀವು. ನಿಮಗೆ ಒಳ್ಳೆಯದಾಗುತ್ತದೆ ಎಂದು ಹರಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸಂತೋಷ್ನದ್ದು ಆತ್ಮಹತ್ಯೆಯೋ, ಕೊಲೆಯೋ? ಈಶ್ವರಪ್ಪ
ಪರಿವಾರದ ಹಿರಿಯರು ಹಾಗೂ ಪಕ್ಷ ಹಾಗೂ ಸರ್ಕಾರಕ್ಕೆ ಇರಿಸು-ಮುರಿಸು ಆಗಬಾರದು. ಹಾಗಾಗಿ ನಿನ್ನೆ ಹೋಗಿ ರಾಜೀನಾಮೆ ಕೊಟ್ಟಿದ್ದೇನೆ. ರಾಜ್ಯ ನಾಯಕರು ಎಲ್ಲರೂ ಜೊತೆ ಮಾತಾಡಿಯೇ ನಿರ್ಧಾರ ಮಾಡಿದ್ದೇನೆ. ಕಾರ್ಯಕರ್ತರು ಅಭಿಮಾನವಿಟ್ಟು ಬೆಂಗಳೂರಿಗೆ ಬಂದಿದ್ದರು. ಅವರಿಗೆ ನಾನು ಅಭಾರಿ ಎಂದು ನುಡಿದರು.
ನನ್ನ ವಿಚಾರದ ಬಗ್ಗೆ ಕಳೆದ 3-4 ದಿನಗಳಿಂದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಜೊತೆ ಮಾತನಾಡುತ್ತಿದ್ದೆ. ಎಲ್ಲರ ಹಿರಿಯರ ಒಪ್ಪಿಗೆ ಪಡೆದು, ಯಾರಿಗೂ ಇರಿಸು ಮುರಿಸು ಆಗಬಾರದು ಎಂಬ ಕಾರಣದಿಂದ ಎಲ್ಲರ ಒಪ್ಪಿಗೆ ಪಡೆದು ರಾಜೀನಾಮೆ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಈಶ್ವರಪ್ಪ ಬಿಜೆಪಿಯಿಂದ ಹಲಾಲ್ ಆದ ಮೊದಲ ವ್ಯಕ್ತಿ: ಸತೀಶ್ ಜಾರಕಿಹೊಳಿ ವ್ಯಂಗ್ಯ
ರಾಜೀನಾಮೆ ಕೊಡುವುದು ಬಲಪ್ರದರ್ಶನ ಅಲ್ಲ. ನಾನು ರಾಜೀನಾಮೆ ಕೊಡ್ತೀನಿ ಅಂತಾ ಹೇಳಿದ್ದೆ. ಈ ವಿಷಯ ಹೇಳಿದಾಗ ಕಾರ್ಯಕರ್ತರು ನನ್ನ ಜೊತೆ ಬರುತ್ತೇನೆ ಎಂದರು. ನಾನು ಒಂದು 3-4 ಕಾರಿನಲ್ಲಿ ಬರುತ್ತಾರೆ ಅಂದುಕೊಂಡಿದ್ದೆ. ಆದರೆ ನೂರಾರು ಕಾರಿನಲ್ಲಿ ಬರುತ್ತಾರೆ ಅಂತಾ ನನಗೆ ಗೊತ್ತಿರಲಿಲ್ಲ. ಅವರ ಅಭಿಮಾನ, ಸ್ನೇಹ, ಭಾಂಧವ್ಯ ಬೆಂಗಳೂರುವರೆಗೆ ಬಂದು ಬೆಂಬಲ ಕೊಟ್ಟಿದ್ದು ನನಗೂ ಸಂತೋಷ ಆಯ್ತು ಎಂದರು.