ಬೆಳಗಾವಿ: ಬಿಜೆಪಿಯಿಂದ ಮೊಟ್ಟ ಮೊದಲು ಹಲಾಲ್ ಆದ ವ್ಯಕ್ತಿ ಈಶ್ವರಪ್ಪ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯಿಂದ ಹಲಾಲ್ಗೆ ಮೊದಲು ಬಲಿಯಾಗಿದ್ದು ಈಶ್ವರಪ್ಪ. ಹಲಾಲ್ ಆಗಲು ಇನ್ನು ಬಹಳಷ್ಟು ಜನರ ಸರದಿ ಬರಲಿದೆ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ. ಇನ್ನೂ ಅನೇಕ ಸಚಿವರು ಭ್ರಷ್ಟಾಚಾರಕ್ಕೆ ಬಲಿ ಆಗಲಿದ್ದಾರೆ. ರಾಜ್ಯ ಸರ್ಕಾರದಲ್ಲಿ ಶೇ.40 ಕಮಿಷನ್ ಇದೆ. ಕೇವಲ ರಾಜೀನಾಮೆ ಅಲ್ಲ, ಈಶ್ವರಪ್ಪ ಬಂಧನ ಆಗೋವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಂತೋಷ್ನದ್ದು ಆತ್ಮಹತ್ಯೆಯೋ, ಕೊಲೆಯೋ? ಈಶ್ವರಪ್ಪ

ಕೋವಿಡ್ ಸಮಯದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ. ಸದ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ 40% ಕಮಿಷನ್ ಇದೆ. ದೂರು ಕೊಡುವವರು ಮುಂದೆ ಬಂದರೆ ಇನ್ನೂ ಹೆಚ್ಚು ವಿಕೆಟ್ಗಳು ಬೀಳುತ್ತವೆ. ಕಾಂಗ್ರೆಸ್ ಪಕ್ಷದಿಂದ ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಇಂದಿನಿಂದ ಪ್ರತಿ ಜಿಲ್ಲೆಯಲ್ಲೂ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ, ಮುಸ್ಲಿಮರ ಮಧ್ಯೆ ಮತ-ಭೇದ ಪ್ರಾರಂಭವಾಗೋದಕ್ಕೆ ಈ 6 ವಿದ್ಯಾರ್ಥಿನಿಯರೇ ಕಾರಣ: ರಘುಪತಿ ಭಟ್

ಬಿಜೆಪಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಅದಕ್ಕೆ ಕೇಂದ್ರ ಸರ್ಕಾರದ ನರೇಂದ್ರ ಮೋದಿ ಬೆಂಬಲ ಇದೆ. ಇಷ್ಟೆಲ್ಲಾ ಹಗರಣ ಆದರೂ ಮೋದಿ ಸುಮ್ಮನೆ ಕುಳಿತಿದ್ದಾರೆ. ಭಾರತದ ಭವಿಷ್ಯದ ಬಗ್ಗೆ ಈಗಾಗಲೇ ಆರ್ಥಿಕ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಕೂಡಲೇ ಜನರು ಎಚ್ಚೆತ್ತುಕೊಳ್ಳದಿದ್ದರೆ ಭಾರತಕ್ಕೆ ಕೆಟ್ಟ ಕಾಲ ಬರುತ್ತೆ ಎಂದು ಭವಿಷ್ಯ ನುಡಿದರು.



