ಕೋಲ್ಕತ್ತಾ: ಬಿರ್ಭುಮ್ನಲ್ಲಿ ನಡೆದ ಘಟನೆಯನ್ನು ಸಿಬಿಐ ವಹಿಸಿಕೊಂಡಿದೆ. ಇದು ಒಳ್ಳೆಯ ನಿರ್ಧಾರ. ಆದರೆ ಬಿಜೆಪಿ ನಿರ್ದೇಶನಗಳನ್ನು ಅವರು ಅನುಸರಿಸಿದರೆ ನಾವು ಪ್ರತಿಭಟನೆಗೆ ಸಿದ್ಧ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿರ್ಭುಮ್ ಘಟನೆಯನ್ನು ಸಿಬಿಐ ವಹಿಸಿಕೊಂಡಿದೆ. ಇದು ಒಳ್ಳೆಯ ನಿರ್ಧಾರ. ಆದರೆ ಬಿರ್ಭುಮ್ ಹತ್ಯೆಯ ಹಿಂದೆ ಪಿತೂರಿ ಇದೆ ಎಂದು ನಾನು ಈಗಲೂ ಭಾವಿಸುತ್ತೇನೆ ಎಂದು ತಿಳಿಸಿದರು.
ತೃಣಮೂಲ ಕಾರ್ಯಕರ್ತನನ್ನು ಮತ್ತೊಂದು ಪಕ್ಷದ ಕಾರ್ಯಕರ್ತ ಕೊಂದಿದ್ದಾನೆ. ಆದರೆ ಟಿಎಂಸಿಯನ್ನು ಮಾತ್ರ ಎಲ್ಲೆಡೆ ಟೀಕೆ ಮಾಡಲಾಗುತ್ತಿದೆ. ರಾಮ್ಪುರಹತ್ ಘಟನೆಯ ಮೂಲ ಕಾರಣವನ್ನು ತಿಳಿಯಲು ತನಿಖೆ ಕೈಗೊಂಡಿದ್ದು, ಅನೇಕ ಕ್ರಮಗಳನ್ನು ಅನುಸರಿಸುತ್ತಿದ್ದೇವೆ ಎಂದರು.
ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ತ್ರಿಪುರಾ ಮತ್ತು ಅಸ್ಸಾಂನಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ. ಆಗ ನಮ್ಮ ಪಕ್ಷದ ಕಾರ್ಯಕರ್ತರಿಗೆ ಘಟನಾ ಸ್ಥಳಕ್ಕೆ ಬರಲು ಅವಕಾಶ ನೀಡಲಿಲ್ಲ. ಆದರೆ ಬಿರ್ಭುಮ್ನಲ್ಲಿ ನಾವು ಯಾವುದೇ ಪಕ್ಷವನ್ನು ತಡೆದಿಲ್ಲ ಎಂದರು. ಇದನ್ನೂ ಓದಿ: ಮಹಿಳಾ ದಿನಾಚರಣೆ – ಪತ್ನಿ ಜೊತೆ ಬಿಂದಾಸ್ ಸ್ಟೆಪ್ಸ್ ಹಾಕಿದ ಶಾಸಕ
ಏನಿದು ಪ್ರಕರಣ?: ಇಲ್ಲಿನ ಬಗುಟಿ ಗ್ರಾಮ ಪಂಚಾಯ್ತಿ ಮುಖಂಡ ಭಾದು ಶೇಖ್ ಅವರ ಮೇಲೆ ಸೋಮವಾರ ರಾತ್ರಿ ದಾಳಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ-60ರ ಅಂಗಡಿಯೊಂದರಲ್ಲಿ ಇರುವಾಗ ಶೇಖ್ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು 10 ರಿಂದ 12 ಮನೆಗೆ ಬೆಂಕಿ ಹಚ್ಚಿದ್ದರು. ಇದರಿಂದಾಗಿ 8 ಮಂದಿ ಸಜೀವ ದಹನವಾಗಿದ್ದರು.
ಇದರಲ್ಲಿ ಇಬ್ಬರು ಮಕ್ಕಳೂ ಸಹ ಇದ್ದರು ಎಂಬುದಾಗಿ ಬಿರ್ಭುಮ್ ಎಸ್ಪಿ ನಾಗೇಂದ್ರ ತ್ರಿಪಾಟಿ ಮಾಹಿತಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಸ್ವಯಂಪ್ರೇರಿತವಾಗಿಯೇ ವಿಚಾರಣೆ ನಡೆಸಲು ಮುಂದಾಗಿತ್ತು. ಈ ನಡುವೆ ಜಿಲ್ಲೆಯ ಕೆಲ ಕುಟುಂಬಗಳು ಹಿಂಸಾಚಾರಕ್ಕೆ ಬೆಚ್ಚಿಬಿದ್ದಿದ್ದು, ತಮ್ಮ ಮನೆಗಳನ್ನು ತೊರೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 21 ಆರೋಪಿಗಳನ್ನು ಸಿಬಿಐ ಹೆಸರಿಸಿದೆ. ಇದನ್ನೂ ಓದಿ: ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಪಿ.ವಿ ಸಿಂಧು