ಉಡುಪಿ: ರಾಜ್ಯಾದ್ಯಂತ ಹಿಜಬ್ ಗಲಾಟೆ ತಾರಕಕ್ಕೆ ಏರುತ್ತಿದ್ದು, ಈ ನಡುವೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಗೆ ನಾಲ್ವರು ಹಿಂದೂ ವಿದ್ಯಾರ್ಥಿನಿಯರು ಬೆಂಗಾವಲಾಗಿ ನಿಂತು ಕಾಲೇಜಿಗೆ ಕರೆದುಕೊಂಡು ಬಂದಿರುವ ದೃಶ್ಯವೊಂದು ಪಬ್ಲಿಕ್ ಟಿವಿಗೆ ಸೆರೆ ಸಿಕ್ಕಿದೆ.
ಉಡುಪಿಯ ಮಹಿಳಾ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಭಯ, ಕಿರಿಕಿರಿಗೆ ಹಿಂದೂ ಸಹಪಾಠಿಗಳು ಮಾನಸಿಕ ಶಕ್ತಿ ತುಂಬಿ, ಮುಸ್ಲಿಂ ವಿದ್ಯಾರ್ಥಿನಿಗೆ ಬೆಂಗಾವಲಾಗಿ ಹಿಂದೂ ವಿದ್ಯಾರ್ಥಿನಿಯರು ನಿಂತಿದ್ದಾರೆ.
ಉಡುಪಿ ಜಿಲ್ಲೆ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿತ್ತು. ಇಲ್ಲಿಯವರೆಗೂ ಯಾವುದೇ ಕೋಮು ಸಂಘರ್ಷಗಳು, ಹಿಂದೂ – ಮುಸ್ಲಿಂ ಸಮುದಾಯದ ನಡುವೆ ಬಿರುಕುಗಳಿರಲಿಲ್ಲ. ಹಿಜಬ್ ಮತ್ತು ಕೇಸರಿ ಕಾಳಗದ ನಂತರ ಜಿಲ್ಲೆಯಾದ್ಯಂತ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಒಂದೇ ಬೆಂಚ್ನಲ್ಲಿ ಕುಳಿತುಕೊಳ್ಳುವ ಗೆಳತಿಯಾಗಿದ್ದರೂ ಮನೆ ಪಕ್ಕದಲ್ಲಿ ಹತ್ತಾರು ವರ್ಷಗಳಿಂದ ಜೊತೆಗೆ ಜೀವನ ನಡೆಸುತ್ತಿದ್ದರೂ, ಎಲ್ಲರನ್ನೂ ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನ 6 ವಿದ್ಯಾರ್ಥಿನಿಯರ ಹಿಜಬ್ ಹೋರಾಟ, ಅದೇ ಕ್ಯಾಂಪಸ್ನ 80ಕ್ಕಿಂತ ಹೆಚ್ಚು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಇರಿಸುಮುರುಸು ತಂದಿದೆ. ಪ್ರತಿದಿನ ಕಾಲೇಜಿನ ಮುಂದೆ ಮೂವತ್ತಕ್ಕೂ ಹೆಚ್ಚು ಮಾಧ್ಯಮಗಳ ಕ್ಯಾಮೆರಾ ಸಾಲುಗಟ್ಟಿ ನಿಂತಿರುತ್ತದೆ. ಹಿಜಬ್ ಹೋರಾಟಗಾರ್ತಿಯರು ಕಾಲೇಜಿಗೆ ಬರಬಹುದು ಪ್ರತಿಭಟನೆ ಮುಂದುವರಿಸಬಹುದು ಎಂಬ ಮಾಹಿತಿಯ ಮೇರೆಗೆ ಮಾಧ್ಯಮಗಳು ದೃಷ್ಟಿ ಇಟ್ಟಿರುತ್ತದೆ. ಇದನ್ನೂ ಓದಿ: ತಾಕತ್ತಿದ್ದರೆ ನನ್ನನ್ನು ತುಂಡು, ತುಂಡು ಮಾಡಲಿ ನೋಡೋಣ: ಆಂದೋಲಾ ಶ್ರೀ ಕಿಡಿ
ಈ ಸಂದರ್ಭದಲ್ಲಿ ಬುರ್ಖಾ ಹಿಜಬ್ ತೊಟ್ಟು ಕಾಲೇಜಿನ ಕ್ಯಾಂಪಸ್ಸಿಗೆ ಮುಸಲ್ಮಾನ ಸಮುದಾಯದ ವಿದ್ಯಾರ್ಥಿನಿಯರು ಬರುತ್ತಾರೆ. ತರಗತಿಗೆ ಹೋಗುವ ಮುನ್ನ ಬುರ್ಖಾ ಹಿಜಬ್ ಕಳಚಿ ಇಡುತ್ತಾರೆ. ಆದರೆ ಈ ಎಲ್ಲಾ ವಿದ್ಯಾರ್ಥಿಗಳು ಬಹಳ ಇರುಸುಮುರುಸು ಅನುಭವಿಸುತ್ತಿದ್ದಾರೆ. ತನ್ನ ಹಿಂದೂ ಗೆಳತಿಯರ ಜೊತೆ ಬರುತ್ತಾ ಕ್ಯಾಮರಾಗಳನ್ನು ಕಂಡು ಬುರ್ಖಾ ಹಿಜಬ್ ಮತ್ತು ಮಾಸ್ಕ್ ಹಾಕಿದ್ದರೂ ಕೈಯಿಂದ ಮುಖಮುಚ್ಚಿಕೊಂಡು ಕಾಲೇಜಿನ ಕ್ಯಾಂಪಸ್ಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸ್ಥಳೀಯರಿಗೆ ಖಾಸಗಿ ವಲಯದಲ್ಲಿ ಶೇ.75ರಷ್ಟು ಉದ್ಯೋಗವಕಾಶ – ಸುಪ್ರೀಂನಲ್ಲಿ ಹರ್ಯಾಣಕ್ಕೆ ಜಯ