ಬಳ್ಳಾರಿ: ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಒಬ್ಬ ಪ್ರಾಮಾಣಿಕ ಅಧಿಕಾರಿ, ಅವರನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರು ಬೆಳೆದುಬಂದ ಹಾದಿ, ಶಿಕ್ಷಣ ಪಡೆದ ರೀತಿ, ಅವರ ತಂದೆ, ತಾಯಿ ಎಲ್ಲವನ್ನೂ ನಾನು ನೋಡಿದ್ದೇನೆ. ಹೀಗಾಗಿ ಅವರ ಮೇಲೆ ಬಂದಿರುವ ಆರೋಪ ಶುದ್ಧ ಸುಳ್ಳು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ರವಿ ಚೆನ್ನಣ್ಣನವರ್ ಬಗ್ಗೆ ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು, ಆರೋಪಗಳು ಯಾರಿಗೂ ಬಿಟ್ಟಿಲ್ಲ, ಹಾಗೆ ಅವರ ಮೇಲೆ ಈಗ ಆರೋಪ ಬಂದಿದೆ, ಆರೋಪ ಮಾಡಿದ್ದಾರೆ ಎಂದಾಕ್ಷಣ, ಅವರ ಭ್ರಷ್ಟ ಅಧಿಕಾರಿ ಎನ್ನುವುದು ತಪ್ಪು. ಇಡೀ ರಾಜ್ಯದಲ್ಲಿ ಯುವಕರಿಗೆ ಮಾದರಿಯಾದ ವ್ಯಕ್ತಿ ರವಿ, ಲಕ್ಷಾಂತರ ಜನರು ಅವರನ್ನು ಮೆಚ್ಚಿದ್ದಾರೆ. ಭ್ರಷ್ಟಾಚಾರದ ಆರೋಪಗಳು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರನ್ನು ಬಿಟಿಲ್ಲ, ಅವರು ಕಾನೂನು ಹೋರಾಟದ ಮೂಲಕ ಗೆದ್ದ ಬರಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ ಎಂದರು. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್
ಸಚಿವ ಆನಂದ್ ಸಿಂಗ್ ಹಾಗೂ ಡಿ.ಕೆ ಶಿವಕುಮಾರ್ ಭೇಟಿ ಕುರಿತಾಗಿ ಮಾತನಾಡಿ, ಅವರಿಬ್ಬರ ಬೇಟಿ ಬಗ್ಗೆ ಯಾವುದೇ ರಾಜಕೀಯ ಬಣ್ಣ ಬರೆಯುವುದು ಬೇಡ, ಆನಂದ್ ಸಿಂಗ್ ನೇರಾ, ನೇರಾ ವ್ಯಕ್ತಿ ಹಾಗೂ ನನ್ನ ಆತ್ಮೀಯ ಸ್ನೇಹಿತ. ಆನಂದ್ ಸಿಂಗ್ ದೂರ ದೃಷ್ಟಿ ಇರುವ ನಾಯಕರು. ಬೇರೆ ಯಾವುದೋ ಕಾರಣಕ್ಕೆ ಡಿ.ಕೆ ಶಿವಕುಮಾರನ್ನು ಮೀಟ್ ಆಗಿರಬಹುದಷ್ಟೇ, ಆನಂದ್ ಸಿಂಗ್ ಮೇಲೆ ನನಗೆ ಪೂರ್ಣ ನಂಬಿಕೆ ಇದೆ. ಅವರು ದೂರ ಹೋಗುವುದಾದರೆ ನೇರವಾಗಿ ಹೇಳುತ್ತಿದ್ದರು. ಅವರು ಮೋಸ ಮಾಡುವಂತಹ ವ್ಯಕ್ತಿ ಅಲ್ಲ. ಅವರು ಎಲ್ಲೂ ಹೋಗಲ್ಲ. 2023 ಚುನಾವಣೆಯಲ್ಲಿ ಅವರ ನೇತೃತ್ವದಲ್ಲೇ ಚುನಾವಣೆ ಮಾಡ್ತೀವಿ. ಅವರು ನಾವು ಒಟ್ಟಾಗಿ ಅಖಂಡ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: Budget 2022: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ