ಬೆಂಗಳೂರು: ರಾಜ್ಯಾದ್ಯಂತ ಮಳೆಯಬ್ಬರ ಮುಂದುವರಿದಿದೆ. ರಣಮಳೆಗೆ ಮಧ್ಯ ಕರ್ನಾಟಕ ಮುಳುಗಿದೆ. ಇನ್ನು ದಕ್ಷಿಣ, ಮಧ್ಯಕರ್ನಾಟಕದಲ್ಲಿ ಅಕಾಲಿಕ ಮಳೆ ಅವಾಂತರ ಸೃಷ್ಟಿಸಿದ್ದು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಬೊಬ್ಬಿರಿಯುತ್ತಿದ್ದಾನೆ. ರಾಜ್ಯಾದ್ಯಂತ ಮಹಾಮಳೆಗೆ ಈವರೆಗೆ 6 ಮಂದಿ ಬಲಿಯಾಗಿದ್ದಾರೆ.
ಬರದನಾಡು ಚಿಕ್ಕಬಳ್ಳಾಪುರದಲ್ಲಿ ಕಂಡು ಕೇಳರಿಯದ ಮಳೆಯಾಗ್ತಿದೆ. ಪರಿಣಾಮ ಗೌರಿಬಿದನೂರಿನಲ್ಲಿ ಉತ್ತರ ಪಿನಾಕಿನಿ ನದಿ ಮೈದುಂಬಿ ಹರಿಯುತ್ತಿದ್ದು, ನದಿಯ ಅಕ್ಕಪಕ್ಕದಲ್ಲಿ ವಾಸಿಸುತ್ತಿರುವ ಸಾವಿರಾರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರನ್ನು ತಾಲೂಕು ಆಡಳಿತ, ನಗರಸಭೆ ವತಿಯಿಂದ ನಗರದ ಖಾಸಗಿ ಕಲ್ಯಾಣ ಮಂಟಪಗಳಿಗೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ಬಿಡಿಎ ಅಧಿಕಾರಿಗಳಿಗೆ ಎಸಿಬಿ ಶಾಕ್- ಕಂತೆ ಕಂತೆ ನೋಟು, ಬ್ಯಾಗ್ಗಟ್ಟಲೆ ದಾಖಲೆಗಳು ವಶ!
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮಂಚೇನಹಳ್ಳಿ ಬಳಿ ಉತ್ತರಪಿನಾಕಿನ ನದಿಯ ಭೋರ್ಗೆರೆತ ಜೋರಾಗಿದ್ದು, ಮಂಚೇನಹಳ್ಳಿ-ತೊಂಡೆಬಾವಿ ಮಾರ್ಗ ಮಧ್ಯೆ ಇರುವ ಸೇತುವೆ ತಳಪಾಯ ಕೊಚ್ಚಿ ಹೋಗಿದೆ. ಸೇತುವೆ ಮೇಲೆ ವಾಹನಗಳ ಓಡಾಟ ಸಂಪೂರ್ಣ ನಿಷೇಧಿಸಲಾಗಿದೆ.
ವರುಣನ ಅರ್ಭಟಕ್ಕೆ ಕೋಲಾರ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಕೋಲಾರ ನಗರ, ಬಂಗಾರಪೇಟೆ, ಶ್ರೀನಿವಾಸಪುರ ಪಟ್ಟಣ, ಗೌನಿಪಲ್ಲಿ, ಕೆಜಿಎಫ್ ನಗರದಲ್ಲಿ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ. ಇಬ್ಬರು ಮೃತಪಟ್ಟಿದ್ದಾರೆ. 9 ಮನೆಗಳು ಬಿದ್ದಿದೆ. 306 ಮನೆಗಳು ಭಾಗಶಃ ಹಾನಿಯಾಗಿವೆ. ಬಿಜಿಎಸ್ ಶಾಲೆಯೂ ಮುಳುಗಡೆಯಾಗಿದೆ. ಇನ್ನು ಅಕಾಲಿಕ ಮಳೆಯಿಂದಾಗಿ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಜಿಲ್ಲೆಯ ಶೇ.98ರಷ್ಟು ಕೆರೆಗಳು ತುಂಬಿ ಕೋಡಿ ಹರಿದಿವೆ.
ನಿರಂತರ ಮಳೆಯಿಂದ ಕೊಡಗಿನ ಹಲವೆಡೆ ಭತ್ತ, ಜೋಳದ ಬೆಳೆ ನಾಶವಾಗಿದೆ. ಗದ್ದೆಗಳಲ್ಲಿ ನೀರು ನಿಂತು ಭತ್ತದ ಬೆಳೆ ಕೊಳೆಯುತ್ತಿದೆ. ಇನ್ನು ಕುಶಾಲನಗರ ತಾಲ್ಲೂಕು ಒಂದರಲ್ಲೇ ಬರೋಬ್ಬರಿ 800 ಎಕರೆಯಷ್ಟು ಮೆಕ್ಕೆಜೋಳ ನಷ್ಟವಾಗಿದೆ. ಸತತ ಮಳೆಯಿಂದ ಮೆಕ್ಕೆಜೋಳ ಗಿಡದಲ್ಲೇ ಮೊಳಕೆ ಒಡೆಯುತ್ತಿದೆ. ಇದರಿಂದಾಗಿ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ದಾವಣಗೆರೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹರಿಹರ ತಾಲೂಕಿನಲ್ಲಿ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನೇನು ಎರಡು ದಿನಗಳಲ್ಲಿ ಕಟಾವು ಮಾಡಿ ಮಾರುಕಟ್ಟೆ ಹಾಕಬೇಕು ಅಂತಿದ್ದ ಅನ್ನದಾತರು ಕಂಗಾಲಾಗಿದ್ದಾರೆ. ಆದಾಪುರ, ಜಿಗಳಿ, ಮಲೆಬೆನ್ನೂರಿನಲ್ಲೂ ಸಾವಿರಾರು ಎಕರೆ ಭತ್ತ ಸಂಪೂರ್ಣ ನೆಲ ಕಚ್ಚಿದೆ.
ದಾವಣಗೆರೆಯಲ್ಲಿ ಮಳೆ ಅವಾಂತರ ಮುಂದುವರಿದಿದೆ. ನಿನ್ನೇ ರಾತ್ರಿಯಿಂದ ಬಿಡದೆ ಬರುತ್ತಿರುವ ಮಳೆಯಿಂದಾಗಿ ಕೆರೆ ಕಟ್ಟೆಗಳು ಸಂಪೂರ್ಣ ಭರ್ತಿಯಾಗಿದೆ. ಚನ್ನಗಿರಿ ತಾಲೂಕಿನ ಗೋಪೇನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿದೆ. ಮಾವಿನಹಳ್ಳಿ ಕೆರೆ ಭರ್ತಿಯಾಗಿ ಕೋಡಿಬಿದ್ದಿದೆ. ಜೋಳದಾಳ್ ಅಮ್ಮನಗುಡ್ಡದ ಕಲ್ಲು ಕಟ್ಟುವ ಚೌಡೇಶ್ವರಿ ದೇವಾಲಯ ಮುಳುಗಡೆಯಾಗಿದೆ. ಹರಿದ್ರಾವತಿ ಹಳ್ಳ ತುಂಬಿ ಹರಿದು ಚನ್ನಗಿರಿ ತಾಲ್ಲೂಕಿನ ಬುಳಸಾಗರ ಗ್ರಾಮದಲ್ಲಿರೋ ಸಿದ್ದರಾಮೇಶ್ವರ ರಂಗನಾಥಸ್ವಾಮಿ, ಆಂಜನೇಯ ಸ್ವಾಮಿ ದೇವಾಲಯಗಳಿಗೆ ನೀರು ನುಗ್ಗಿದೆ. ರೈಲ್ವೇ ಅಂಡರ್ಪಾಸ್ ಮುಳುಗಡೆಯಾಗಿದೆ.
ಅಕಾಲಿಕ ಮಳೆಯಿಂದ ಕೊಪ್ಪಳ ಜಿಲ್ಲಾದ್ಯಂತ ಸಾಕಷ್ಟು ಬೆಳೆ ಹಾನಿಯಾಗಿದೆ. ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಗಂಗಾವತಿ ಮತ್ತು ಕಾರಟಗಿ ತಾಲೂಕಿನಲ್ಲಿ ಕಟಾವಿಗೆ ಬಂದಿದ್ದ ಭತ್ತ ಸಂಪೂರ್ಣವಾಗಿ ನೆಲ ಕಚ್ಚಿದೆ. ಕೊಯ್ಲಿಗೆ ಬಂದಿದ್ದ ಭತ್ತ ನೆಲಕ್ಕೆ ಬಿದ್ದು, ನೀರು ಪಾಲಾಗಿದೆ. ಇನ್ನು ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದ್ದು ಜಲಾಶಯದಿಂದ ಅಪಾರ ಪ್ರಮಾಣ ನೀರನ್ನು ನದಿಗೆ ಬಿಡುಗಡೆ ಮಾಡಲಾಗ್ತಿದ್ದು ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.