ಮಡಿಕೇರಿ: ರಾಜ್ಯದ ಅಲ್ಲಲ್ಲಿ ಅಸ್ಪೃಶ್ಯತೆ ಆಚರಣೆಯಂತಹ ಘಟನೆಗಳ ಬಗ್ಗೆ ಮಾಹಿತಿ ಇದೆ. ಮುಂದೆ ಇಂತಹ ಪ್ರಕರಣಗಳು ಮತ್ತೆ ಬೆಳಕಿಗೆ ಬಂದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಎಚ್ಚರಿಸಿದರು.
ಸೋಮವಾರ ಮಡಿಕೇರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತಾನಾಡಿದ ಅವರು, ರಾಜ್ಯದ ಹಲವೆಡೆ ಅಸ್ಪೃಶ್ಯತೆ ಆಚರಣೆ ಈ ಹಿಂದಿನಿಂದಲೂ ಅಗುತ್ತಿದೆ. ಅಸ್ಪೃಶ್ಯತೆ ಆಚರಣೆ ಕಂಡು ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ದೊಡ್ಡ ಆಂದೋಲನ ನಡೆಸಲಾಗುವುದು. ಅದಕ್ಕಾಗಿ ಪೂರ್ವಭಾವಿ ತಯಾರಿ ಮಾಡಲಾಗುತ್ತಿದೆ. ಎಸ್ಸಿ/ಎಸ್ಟಿಗಳ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಮುದಾಯದ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೀಸಲಿರುವ ಶೇ. 24ರಷ್ಟು ಅನುದಾನವನ್ನು ಸಂಪೂರ್ಣವಾಗಿ ಬಳಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ
ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಅರ್ಥಿಕ ಮತ್ತು ಸಾಮಾಜಿಕ ಶಕ್ತಿಯನ್ನು ತುಂಬಿಸುವುದು ಸೇರಿದಂತೆ ಅಸ್ಪೃಶ್ಯತೆಯನ್ನು ನಿವಾರಣೆ ಮಾಡುವುದು ಹಾಗೂ ಕಡುಬಡವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಸಮಾಜ ಕಲ್ಯಾಣ ಇಲಾಖೆಯ ಮೂಲ ಉದ್ದೇಶ. ಕರ್ನಾಟಕ ರಾಜ್ಯದಲ್ಲಿ 1.27 ಕೋಟಿ ಜನ ಪರಿಶಿಷ್ಟ ಜಾತಿ ಸಮುದಾಯದವರಿದ್ದಾರೆ. ಸುಮಾರು 28 ಲಕ್ಷ ಕುಟುಂಬಗಳು ಇವೆ. ಅವುಗಳ ಪೈಕಿ ಕೆಲವರಿಗೆ ಸ್ವಂತ ಮನೆ, ನೆಲೆ ಇಲ್ಲ. ಕೆಲವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕುಡಿಯುವ ನೀರು, ಶೌಚಾಲಯದ ಸಮಸ್ಯೆ ಕೂಡ ಇದೆ. ಅವುಗಳ ಬಗ್ಗೆ ಸಮೀಕ್ಷೆ ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಮೋದಿ ಶುಭಾಶಯ
ಶೋಷಿತ ಸಮುದಾಯಗಳಿಗೆ ಬೇಕಾಗಿರುವ ಮನೆ, ಕುಡಿಯುವ ನೀರು ಮತ್ತು ವಿದ್ಯಾಭ್ಯಾಸ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಇಲಾಖೆಯಿಂದ ಒದಗಿಸಲಾಗುತ್ತದೆ ಎಂದು ಸಚಿವರು ಹೇಳಿದರು.