ಚಿತ್ರದುರ್ಗ: ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ ಅಸಮಾನತೆ ಹಾಗೂ ಕೋಮುವಾದವನ್ನು ಸಹಿಸಲಾಗದೇ ಕೋಟೆನಾಡು ಚಿತ್ರದುರ್ಗದ 101 ಜನ ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದಾರೆ.
ಚಿತ್ರದುರ್ಗದ ಸ್ಟೇಡಿಯಂ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗೌತಮ ಬುದ್ಧನ ಪ್ರತಿಮೆಯನ್ನು ಬೆಂಗಳೂರಿನ ಮಹಾಬೋಧಿ ಸಂಸ್ಥೆ ಪೀಠಾಧಿಪತಿಗಳಾದ ಆನಂದ ಬಂತೇಜಿಯವರು ಲೋಕಾರ್ಪಣೆ ಮಾಡಿದರು. ಪ್ರತಿಮೆ ಅನಾವರಣದ ಬಳಿಕ ತರಾಸು ರಂಗಮಂದಿರದಲ್ಲಿ ಬೌದ್ಧ ಧರ್ಮ ದೀಕ್ಷೆ ನೀಡಲಾಯಿತು. ಇದನ್ನೂ ಓದಿ: ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಮೋದಿ ಶುಭಾಶಯ
ಬುದ್ಧನ ಪ್ರತಿಮೆ ಅನಾವರಣ ಸ್ವಾಗತ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ನೇತೃತ್ವದಲ್ಲಿ 101 ಜನ ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರವಾದರು. ಈ ವೇಳೆ ಮಾತನಾಡಿದ ತಿಪ್ಪೇಸ್ವಾಮಿ ಅವರು, ಬೌದ್ಧ ಧರ್ಮದ ಅಹಿಂಸೆ, ಸ್ವತಂತ್ರ ಹಾಗೂ ಸಮಾನತಾ ತತ್ವ ಒಪ್ಪಿ ಬೌದ್ಧ ಧರ್ಮಕ್ಕೆ ಮತಾಂತರ ಆಗ್ತಿದ್ದೇವೆ. ನಮಗಿಂತಲೂ ಮುಂಚೆಯೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಹ ಈ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸಿ ಬೌದ್ಧ ಧರ್ಮ ದೀಕ್ಷೆ ಪಡೆದಿದ್ದರು ಎಂದರು.
ಕೋಟೆನಾಡು ಚಿತ್ರದುರ್ಗ ಜಿಲ್ಲೆ ಸಹ ಬೌದ್ಧರ ಅನುಯಾಯಿಗಳ ನೆಲೆಬೀಡಾಗಿದ್ದು, ಮೌರ್ಯರ ದೊರೆ ಅಶೋಕ ಸೇರಿದಂತೆ ಅನೇಕ ಬೌದ್ಧ ಧರ್ಮದ ಅನುಯಾಯಿಗಳು ಕೋಟೆನಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇದಕ್ಕೆ ಕುರುಹುಗಳು ಕೂಡ ಜಿಲ್ಲೆಯಲ್ಲಿವೆ. ಹೀಗಾಗಿ ನಾವುಗಳು ಸಹ ಆನಂದ ಬಂತೇಜಿ ಶ್ರೀಗಳಿಂದ ಇಂದು ಬೌದ್ಧ ಧರ್ಮ ದೀಕ್ಷೆ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಚಿತ್ರದುರ್ಗದ 2000ಕ್ಕೂ ಅಧಿಕ ಹಿಂದೂಗಳು ಬೌದ್ಧ ಧರ್ಮ ದೀಕ್ಷೆ ಪಡೆಯಲಿದ್ದಾರೆಂದು ತಿಳಿಸಿದರು. ಇದನ್ನೂ ಓದಿ: ಅಮೇಜಾನ್ಗೆ ಸೇರಿದ ಕಂಟೇನರ್ನಿಂದ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ರಾಬರಿ
ಇದೇ ವೇಳೆ ಮಹಾಭೊದಿ ಸಂಸ್ಥೆಯ ಶ್ರೀಗಳಾದ ಆನಂದ ಬಂತೇಜಿ ಅವರು ಮಾತನಾಡಿ, ಬೌದ್ಧ ಧರ್ಮ ದೀಕ್ಷೆ ಅನ್ನೋದು ಜಾತಿ, ಧರ್ಮ ಹಾಗೂ ರಾಜ್ಯ ದೇಶಕ್ಕೆ ಸೀಮಿತವಲ್ಲ. ಇಡೀ ಜಗತ್ತಿಗೆ ಭಗವಾನ್ ಬುದ್ಧರ ಸಂದೇಶ ಇಂದು ಅನಿವಾರ್ಯವಾಗಿದೆ. ನಮಗೆ ಯುದ್ಧ ಬೇಡ, ಬುದ್ಧ ಬೇಕೆಂಬ ಪ್ರಚಾರ ನಡೆಯುತ್ತಿದೆ. ಹೀಗಾಗಿ ಬೌದ್ಧ ಧರ್ಮದ ಪಂಚಶೀಲಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯೇ ಧಮ್ಮ ದೀಕ್ಷೆಯಾಗಿದೆ ಎಂದರು.