ಬೆಂಗಳೂರು: ಈಗಾಗಲೇ 9ನೇ ತರಗತಿಯಿಂದ 12ನೇ ತರಗತಿಗವರೆಗೆ ಶಾಲೆ-ಕಾಲೇಜುಗಳನ್ನು ಆರಂಭಿಸಲಾಗಿದೆ. ಸದ್ಯದ ಮಟ್ಟಿಗೆ ಎಲ್ಲಾ ಕಡೆ ಸುಸೂತ್ರವಾಗಿ ತರಗತಿಗಳು ನಡೆಯುತ್ತಿವೆ. ಹೀಗಾಗಿ ಸರ್ಕಾರ ಈ ಹಿಂದೆಯೇ ಹೇಳಿದಂತೆ, 1ನೇ ತರಗತಿಯಿಂದ 8ನೇ ತರಗತಿವರೆಗೂ ಶಾಲಾರಂಭ ಮಾಡುವ ಬಗ್ಗೆ ಆಗಸ್ಟ್ 30ರಂದು ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ಶಿಕ್ಷಣ ತಜ್ಞರ ಜೊತೆ ಚರ್ಚೆ ನಡೆಸಲಿರುವ ಸಿಎಂ ಬೊಮ್ಮಾಯಿ ಮತ್ತು ಶಿಕ್ಷಣ ಮಂತ್ರಿ ಬಿಸಿ ನಾಗೇಶ್, ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಒಂದು ಅಂತಿಮ ತೀರ್ಮಾನಕ್ಕೆ ನಾಳೆಯೇ ಬರುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಹಂತ ಹಂತವಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಆರಂಭಿಸಲಾಗುತ್ತದೆ.
ಇದೇ ವೇಳೆ ಪಾಸಿಟಿವಿಟಿ ದರ ಶೇಕಡಾ 2ಕ್ಕಿಂತ ಹೆಚ್ಚಿದ್ದ ಜಿಲ್ಲೆಗಳಲ್ಲಿ 9ರಿಂದ 12ನೇ ತರಗತಿವರೆಗೂ ಶಾಲಾ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಈಗ ಆ ಐದು ಜಿಲ್ಲೆಗಳ ಪೈಕಿ ನಾಲ್ಕು ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಕಡಿಮೆ ಆಗಿದೆ. ಆ ಜಿಲ್ಲೆಗಳಲ್ಲಿ ಶಾಲೆ -ಕಾಲೇಜು ಆರಂಭಕ್ಕೆ ಸರ್ಕಾರ ನಾಳೆ ಹಸಿರುನಿಶಾನೆ ತೋರಬಹುದು ಎನ್ನಲಾಗುತ್ತಿದೆ. ಸಿಎಂ ಒಪ್ಪಿದ್ರೆ ಮೊದಲ ಹಂತದಲ್ಲಿ 6ರಿಂದ 8ನೇ ತರಗತಿ ಆರಂಭಿಸಲಾಗುವುದು ಎಂದು ಶಿಕ್ಷಣ ಮಂತ್ರಿ ಬಿಸಿ ನಾಗೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆ ಗಡಿ ಭಾಗದ 8 ಜಿಲ್ಲೆಗಳಿಗೆ ಸಿಗುತ್ತಾ ರಿಲೀಫ್ – ಗಣೇಶೋತ್ಸವ ಮಾರ್ಗಸೂಚಿ ಸಡಿಲಕ್ಕೆ ಸರ್ಕಾರ ಪ್ಲಾನ್