ಯಾದಗಿರಿ: ವಡಗೇರಾ ತಾಲೂಕಿನ ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿಯಿಂದ ವಿಷಯುಕ್ತ ತ್ಯಾಜ್ಯವನ್ನು ಕೃಷ್ಣಾ ನದಿಗೆ ಹರಿಬಿಟ್ಟ ಹಿನ್ನೆಲೆ, ನದಿಯ ಹಿನ್ನೀರಿನಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದವು. ಈ ಬಗ್ಗೆ ‘ಪಬ್ಲಿಕ್ ಟಿವಿ ವೆಬ್ಸೈಟ್’ ನಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ವಿಷಯುಕ್ತ ತ್ಯಾಜ್ಯವನ್ನು ನದಿ, ಹಳ್ಳ- ಕೊಳ್ಳಗಳಿಗೆ ಹರಿಬಿಡುವ ಕೆಮಿಕಲ್ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ಅಲ್ಲದೆ ಕೈಗಾರಿಕಾ ಪ್ರದೇಶದಿಂದ ನದಿ, ಹಳ್ಳ-ಕೊಳ್ಳಗಳಿಗೆ ಹರಿದ ಕಲುಷಿತ ರಾಸಾಯನಿಕವನ್ನು ಜಲಚರ, ಪಶು-ಪಕ್ಷಿಗಳು ಸೇವಿಸಿ ನಾಶವಾಗುತ್ತಿವೆ. ಹೀಗಾಗಿ ಮಾಲಿನ್ಯ ಎಸಗುತ್ತಿರುವ ಟೈರ್ ಘಟಕ, ಶುಗರ್ ಫ್ಯಾಕ್ಟರಿ ವಿರುದ್ಧ ಕೂಡಲೇ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡು ಘಟಕವನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.



