ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಡವರು ಹಾಗೂ ಕೂಲಿ ಕಾರ್ಮಿಕರ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಇಂದು ಗೋವಿಂದರಾಜನಗರ ಬಿಜಿಎಸ್ ಗ್ರೌಂಡ್ ನಲ್ಲಿ ಬಾಲಗಂಗಾಧರನಾಥ ಕಂಚಿನ ಪ್ರತಿಮೆ ಅನಾವರಣ ಮಾಡಿ ಬಳಿಕ ಮಾತನಾಡಿದ ಸಚಿವರು, ನಗರಕ್ಕೆ 60 ಸಾವಿರ ವ್ಯಾಕ್ಸಿನ್ ಬಂದಿದೆ. ಇಂದು ವ್ಯಾಕ್ಸಿನ್ಗೆ ತೊಂದರೆ ಆಗಲ್ಲ. ಎರಡು ದಿನಗಳಲ್ಲಿ ವ್ಯಾಕ್ಸಿನ್ ಸಮಸ್ಯೆ ಬಗೆಹರಿಯಲಿದೆ. ಜನರು ಅಸಡ್ಡೆ ಮಾಡಿದ್ರು. ಈಗ ಬೇಡಿಕೆ ಮಾಡ್ತಾ ಇದ್ದಾರೆ. ತಜ್ಞರ ಸಮಿತಿ ಈಗ ಸಲಹೆ ನೀಡಿದೆ ಎಂದರು.
ಲಸಿಕೆ ವಿಚಾರವಾಗಿಯೂ ನಮ್ಮ ಅನುಭವನದ ಪ್ರಕಾರ ಲೆಕ್ಕಚಾರ ಸರಿ ಆಗಲಿಲ್ಲ. ಈ ಬಾರಿ ಲಾಕ್ಡೌನ್ ವಿಭಿನ್ನ ಆಗಿದೆ. ಅಕ್ಕಿ ಕೊಡಲು ನ್ಯಾಯ ಬೆಲೆ ಅಂಗಡಿಗೆ ಸೂಚನೆ ಇದೆ. ವ್ಯಾಪಾರ ಮಾಡಲು ತರಕಾರಿ, ಹಾಲಿಗೆ ಅವಕಾಶ ಇದೆ. ಹಾಗೆಯೇ ಬಡವರು ಹಾಗೂ ಕೂಲಿ ಕಾರ್ಮಿಕರ ಬಗ್ಗೆ ಸಿಎಂ ಶೀಘ್ರವೇ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಲಸಿಕೆ ಇಲ್ಲ ಸಾಯಬೇಕಾ ಎಂಬ ಸದಾನಂದಗೌಡರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದೊಂದು ಬಾರಿ ಉದ್ವೇಗ ಆಗುವುದು ಸಹಜ. ಸಿಎಂ ಆಗಿದ್ದವರು ಈ ರೀತಿ ಮಾತನಾಡಲ್ಲ. ಲೋಕರೂಢಿಯಾಗಿ ಮಾತನಾಡಿ ಸಮಸ್ಯೆ ಮಾಡಿಕೊಳ್ಳಲ್ಲ. ಅವರು ಮಾತನಾಡಿರುವ ಬಗ್ಗೆ ನಾನೇ ಕ್ಷಮೆ ಕೇಳುವೆ ಎಂದರು.
ಇಂದು ಬಸವ ಜಯಂತಿಯಾಗಿದ್ದು, ಜಗತ್ತಿಗೆ ಪ್ರೇರಣೆ ನೀಡುವ ಗುರುಗಳು. ಬಾಲಗಂಗಾಧರ ನಾಥ ಸ್ವಾಮೀಜಿಗಳ ಪುತ್ಥಳಿ ಬದಲಾವಣೆ ಮಾಡಿ ಹೊಸದಾದ ಪುತ್ಥಳಿ ಅನಾವರಣ ಮಾಡಲಾಗಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮ ಬೇಕಿತ್ತಾ..? ಪರಿಸ್ಥಿತಿ ಗಂಬೀರತೆ ನನಗೆ ಅರ್ಥ ಆಗಿದೆ. ಇವತ್ತು ಸಾಂಕೇತಿಕವಾಗಿ ಮಾಡಿದ್ದಿವಿ. ಆದರೂ ಜನರು ಬಂದಿದ್ದಾರೆ. ನೋವಿನ ಮಧ್ಯೆ ಪುತ್ಥಳಿ ಅನಾವರಣ ಮಾಡಲೇಬೇಕಿತ್ತು ಎಂದು ಸಚಿವರು ಹೇಳಿದರು.