ಶಮಂತ್ ಬ್ರೊ ಗೌಡ ಇನ್ನೇನು ಮನೆಯಿಂದ ಆಚೆ ಕಾಲಿಡಬೇಕು ಎಂದುಕೊಳ್ಳುತ್ತಿದ್ದಾಗಲೇ, ಎಲ್ಲವೂ ತಲೆಕೆಳಗಾಯ್ತು. ಶಮಂತ್ ಬದಲು ವೈಜಯಂತಿ ಅಡಿಗ ತಮ್ಮದೇ ಆಗಿರುವ ಕೆಲವು ಕಾರಣ ಕೊಟ್ಟು ಮನೆಯಿಂದ ಆಚೆಗೆ ಹೋದರು. ಇದೀಗ ಶಮಂತ್ ಬಗ್ಗೆ ಇಡೀ ಮನೆಯೇ ಮಾತನಾಡಿಕೊಳ್ಳುತ್ತಿದೆ.
ಶಮಂತ್ಗೆ ಇದೆಯಂತೆ ಮಚ್ಚೆ
ಶಮಂತ್ ಉಳಿದುಕೊಂಡಿದ್ದ ಬಗ್ಗೆ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಚರ್ಚೆ ಮಾಡುತ್ತಿದ್ದರು. ಏನ್ ಅದೃಷ್ಟ ಅಲ್ವಾ ಶಮಂತ್ದು ಎಂದು ದಿವ್ಯಾ ಹೇಳುವಾಗ, ನಿಜವಾಗಿಯೂ ಇದು ಸಾಧ್ಯವೇ ಇಲ್ಲ. ಶಮಂತ್ಗೆ ಏನೋ ಮಚ್ಚೆ ಇದೆ ಎಂದು ಮಂಜು ಹೇಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಪ್ರಿಯಾಂಕ ಮತ್ತು ದಿವ್ಯಾ ಜೋರಾಗಿ ನಕ್ಕಿದ್ದಾರೆ.
ಶಮಂತ್ನಿಂದ ಆಶೀರ್ವಾದ ಪಡೆಯಲು ಸಿದ್ಧರಾದ ಸ್ಪರ್ಧಿಗಳು
ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಬಳಿ ರಾಜೀವ್, ನಮ್ಮ ಬುದ್ದಿಗೆ ಏನಾಗಿದೆ. ಶಮಂತ್ ನಾಮಿನೇಷನ್ ಆಗ್ತಾನೆ ಅಂತ ಬೆಡ್ ರೂಮ್ ಬಿಟ್ಟುಕೊಟ್ಟೆವು. ಎರಡು ವಾರ ಕ್ಯಾಪ್ಟನ್ ಮಾಡಿದ್ವಿ. ಇನ್ಮೇಲೆ ನಾವೆಲ್ಲ ಮಲಗುವಾಗ ಶಮಂತ್ನ ಬೆಡ್ ಮುಟ್ಟಿ ನಮಸ್ಕಾರ ಮಾಡ್ಕೊಂಡು ಮಲಗೋಣ. ಯಾರ್ಯಾರೋ ಜಗಳ ಮಾಡ್ತಾರೆ, ಉಪವಾಸ, ಸತ್ಯಾಗ್ರಹ ಮಾಡ್ತಾರೆ.. ತುಪ್ಪಕ್ಕೆ ಜಗಳ ಎಲ್ಲ ನಡೆಯಿತು… ಅವರೆಲ್ಲ ಮನೆಯಿಂದ ಹೋದ್ರು. ಏನೇ ಆಗಲಿ ಶಮಂತ್ ಹತ್ತಿರ ಬಂದು ಆಶೀರ್ವಾದ ಪಡೆಯಬೇಕು ಎಲ್ಲರೂ ಎಂದು ರಾಜೀವ್ ಹೇಳಿದ್ದಾರೆ.
ರಾಜೀವ್ ಒಂದು ನಿಂಬೆ ಹಣ್ಣು ತೆಗೆದುಕೊಂಡು ಹೋಗಿ ಅದನ್ನು ಶಮಂತ್ ಕೈಗೆ ಇಟ್ಟು ನೀನು ಮನಸಲ್ಲಿ ಏನಾದರೂ ಅಂದುಕೊಂಡು ಈ ನಿಂಬೆ ಹಣ್ಣು ನನಗೆ ಕೊಡು ಎಂದು ಹೇಳಿಕೊಟ್ಟರು. ರಾಜೀವ್ ಹೇಳಿದಂತೆ ಶಮಂತ್ ಅದನ್ನು ಹಣೆ ಬಳಿ ಇಟ್ಟುಕೊಂಡು ವಾಪಸ್ ಕೊಟ್ಟರು. ನಂತರ ಶಮಂತ್ ಮಗಲುವ ಜಾಗಕ್ಕೆ ನಮಸ್ಕರಿಸಿದ ರಾಜೀವ್, ಶಮಂತ್ ಮಂತ್ರಿಸಿಕೊಟ್ಟ ನಿಂಬೆ ಹಣ್ಣನನ್ನು ಮನೆಮಂದಿಗೆಲ್ಲ ಮುಟ್ಟಿಸಿಕೊಂಡು ಬಂದರು.
ಶಮಂತ್ ಎಲಿಮಿನೇಟ್ ಆದರೂ ಮನೆಯಲ್ಲಿ ಉಳಿದುಕೊಂಡಿರುವುದು ಮನೆಯ ಸ್ಪರ್ಧಿಗಳು ಮತ್ತು ವೀಕ್ಷಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಶಮಂತ್ ಕುರಿತಾಗಿ ಇಡೀ ಮನೆಯೆ ಮಾತನಾಡಿಕೊಳ್ಳುತ್ತಿದೆ. ಅದೇನೇ ಆಗಲಿ ಶಮಂತ್ ತಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಚೆನ್ನಾಗಿ ಆಡ್ತಾರಾ ಎಂಬುದನ್ನು ಕಾದುನೋಡಬೇಕಿದೆ.