– ಬೀಫ್ ರಫ್ತಿನಲ್ಲಿ ದೇಶ ನಂ.1 ಆಗಿರೋದಕ್ಕೆ ಯಾರು ಕಾರಣ?
ಮಂಗಳೂರು: ನಗರದ ಹೊರವಲಯದ ಮಳವೂರು ನಲ್ಲಿರುವ ಕಪಿಲಾ ಗೋಶಾಲೆಯನ್ನು ಜಿಲ್ಲಾಡಳಿತ ಹಾಡಹಗಲೇ ಧ್ವಂಸ ಮಾಡಿದ್ದು ಖಂಡನೀಯ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಮೊಹಿಯುದ್ದಿನ್ ಬಾವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಶಾಲೆಯಲ್ಲಿರುವ ಕರುಗಳನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ. ಇವತ್ತು ಬೀಫ್ ರಫ್ತು ಮಾಡುವುದರಲ್ಲಿ ದೇಶ ನಂಬರ್ ಒನ್ ಆಗಿರೋದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು. ನೆಲಸಮಗೊಂಡ ಗೋಶಾಲೆಯ ಮಾಲೀಕನಿಗೆ ನಾನು ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ಹಣವನ್ನು ಸಹಾಯಧನವಾಗಿ ನೀಡುತ್ತೇನೆ. ಇದರಲ್ಲಿ ತಾತ್ಕಾಲಿಕ ಗೋಶಾಲೆ ನಿರ್ಮಿಸಿ ಎಂದು ಚೆಕ್ ನ್ನು ಗೋಶಾಲೆಯ ಮಾಲೀಕ ಪ್ರಕಾಶ್ ಶೆಟ್ಟಿಯವರಿಗೆ ಇದೇ ವೇಳೆ ಮೊಹಿಯುದ್ದಿನ್ ಬಾವಾ ಹಸ್ತಾಂತರಿಸಿದರು.
ಉಳಿದ ಮೊತ್ತವನ್ನು ದೇಣಿಗೆ ಮೂಲಕ ಸಂಗ್ರಹಿಸಿ ಸಹಾಯ ಮಾಡುತ್ತೇನೆ. ಸರ್ಕಾರದ ವತಿಯಿಂದ ಸಿಗುವ ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ. ಮಾತ್ರವಲ್ಲದೆ ಸಹೋದರ ವಿಧಾನ ಪರಿಷತ್ ಸದಸ್ಯ ಬಿ. ಎಂ.ಫಾರೂಕ್ 5 ಲಕ್ಷ, ಉಳಿದ ಎಂಎಲ್ಸಿ ಗಳಿಂದ ದೇಣಿಗೆ ಸಂಗ್ರಹ ಮಾಡುತ್ತೇನೆ ಎಂದು ತಿಳಿಸಿದರು.