– ಛಿದ್ರಗೊಂಡ ಸ್ಥಿಯಲ್ಲಿ ಮೃತದೇಹ ಪತ್ತೆ
ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಬಿಎಸ್ ಯೆಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಸಂಭವಿಸಿದ ಡೈನಾಮೈಟ್ ಬ್ಲಾಸ್ಟ್ಗೆ ಬಲಿಯಾದ ಐವರ ಮೃತ ದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ಹುಣಸೋಡು ಬಳಿ ನಿನ್ನೆ ನಡೆದ ಜಿಲೆಟಿನ್ ಸ್ಫೋಟದಿಂದಾಗಿ 5 ಜನ ಕಾರ್ಮಿಕರು ಮೃತ ಪಟ್ಟಿದ್ದಾರೆ ಎಂಬ ಖಚಿತತೆಯನ್ನು ಜಿಲ್ಲಾಡಳಿತ ಪ್ರಕಟಿಸಿದೆ. ಘಟನೆಯಲ್ಲಿ ಆಂಧ್ರಪ್ರದೇಶ ಮೂಲದ ಮೂವರು ಮತ್ತು ಭದ್ರವತಿಯ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಐವರ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಿಕೊಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
ಭದ್ರಾವತಿ ಮೂಲದ ಅಂತರಗಂಗೆ ಗ್ರಾಮದ ಇಬ್ಬರಾದ ಮಂಜುನಾಥ್ (38) ಪ್ರವೀಣ್ (40) ಮೃತ ದುರ್ದೈವಿಗಳಾಗಿದ್ದು, ಮಂಜುನಾಥ್ ಪತ್ನಿಗೆ 15 ದಿನದ ಹಿಂದೆ ಮತ್ತು ಪ್ರವೀಣ್ ಪತ್ನಿಗೆ 4 ದಿನಗಳ ಹಿಂದೆ ಡೆಲಿವರಿ ಆಗಿತ್ತು. ಈ ಘಟನೆಯಿಂದಾಗಿ ಅಂತರಗಂಗೆ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದ್ದು, ಗ್ರಾಮಸ್ಥರು ಪ್ರತಿ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಗಣಿ ಸಚಿವರಾದ ಮುರುಗೇಶ್ ನಿರಾಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದಿರುವ ಸಚಿವರು, ಘಟನೆಯ ಕುರಿತು ಉನ್ನತ ತನಿಖೆಗಾಗಿ ಸಮಿತಿ ರಚಿಸಲಾಗುವುದು ಮತ್ತು ಮೃತ ಕುಟುಂಬಗಳಿಗೆ ಸಿಎಂ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಣಿ ಇಲಾಖೆ ಮತ್ತು ಕಾರ್ಮಿಕ ಇಲಾಖೆಯಿಂದ ಪರಿಹಾರ ಘೋಘಿಸಲಾಗುವುದು, ಮುಂದೆ ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯದೆ ಇರುವ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಒಂದು ವಿಶೇಷ ತಂಡ ರಚನೆ ಮಾಡಲಾಗುವುದು ಎಂದು ತಿಳಿಸಿದರು.