ಬೆಂಗಳೂರು: ಉಪ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಕ್ಕೆ ಕ್ಷಣ ಗಣನೆ ಶುರುವಾಗಿರುವಾಗಲೇ ಕಾಂಗ್ರೆಸ್ ನಾಯಕರಿಗೆ ಆರ್.ಆರ್. ನಗರ ಅಭ್ಯರ್ಥಿ ಸಖತ್ ಟಾಂಗ್ ನೀಡಿದ್ದಾರೆ. ಮುಖ್ಯಮಂತ್ರಿಗಳ ಜೊತೆಗಿನ ರೋಡ್ ಶೋ ವೇಳೆ ಕಾಂಗ್ರೆಸ್ಸಿನ ಪ್ರಚೋದನಾಕಾರಿ ಹೇಳಿಕೆಗಳಿಗೆ ಉತ್ತರ ಕೊಟ್ಟಿದ್ದಾರೆ. ಯಾವುದೇ ಆಸೆ-ಅಮಿಷಗಳಿಗೆ ಒಳಗಾಗಿ ನಾನು ಬಿಜೆಪಿ ಸೇರಿಲ್ಲ. ಅಭಿವೃದ್ಧಿ ದೃಷ್ಟಿಯಿಂದಲೇ ಪಕ್ಷ ಸೇರಿರೋದ್ದಾಗಿ ಸ್ಪಷ್ಟಪಡಿಸಿದ್ದಾರೆ. ನಾನು ಹಣ ಪಡೆದು ಬಿಜೆಪಿ ಸೇರಿರೋದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ರಾಜರಾಜೇಶ್ವರಿ ಹಾಗೂ ಧರ್ಮಸ್ಥಳದಲ್ಲಿ ಬೇಕಿದ್ದರೆ ಆಣೆ ಪ್ರಮಾಣ ಮಾಡಲಿ. ನಾನು ಬಹಿರಂಗಪ್ರಚಾರಕ್ಕೆ ಸಿದ್ಧ ಅಂತ ಪಂಥಾಹ್ವಾನ ನೀಡಿದ್ದಾರೆ.
ಆರ್.ಆರ್.ನಗರ ಡಿ.ಜೆ. ಹಳ್ಳಿ ಆಗೋದು ಬೇಡ:
ಕಾಂಗ್ರೆಸ್ ನಾಯಕರು ಸೋಲುವ ಭೀತಿಯಿಂದ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಕ್ಷೇತ್ರವನ್ನು ವಶಪಡಿಸಿಕೊಳ್ಳುತ್ತೇವೆ, ಛಿದ್ರ ಮಾಡುತ್ತೇವೆ ಅನ್ನುತ್ತಿದ್ದಾರೆ. ಕುಣಿಗಲ್ ಹಾಗೂ ಕನಕಪುರದಿಂದ ಕ್ಷೇತ್ರಕ್ಕೆ ಜನರನ್ನು ಕರೆಸಿಕೊಂಡಿದ್ದಾರೆ. ನಾವು ಮತಭಿಕ್ಷೆ ಕೇಳಲು ಬಂದಿದ್ದೇವೆ. ಮತ ಕೊಟ್ರೆ ತಗೋಬೇಕು ಕೊಡ್ಲಿಲ್ಲಾಂದ್ರೆ, ಮುಂದೆ ಹೋಗ್ಬೇಕು. ಈ ಕ್ಷೇತ್ರವನ್ನು ಮುಂದೆ ಕೆಜಿ, ಡಿಜೆ ಹಳ್ಳಿ ಆಗಲು ಬಿಡಬೇಡಿ ಅಂತ ಮುನಿರತ್ನ ಮನವಿ ಮಾಡಿದ್ರು.
ಇದಕ್ಕೂ ಮುನ್ನ ಬಿಜೆಪಿ ಕಚೇರಿಯಲ್ಲಿ ನಡೆದ ವರ್ಚುವಲ್ ರ್ಯಾಲಿಯಲ್ಲಿ ಮಾತನಾಡಿದ ಮುನಿರತ್ನ, ಸಮಿಶ್ರ ಸರ್ಕಾರದಲ್ಲಿ ನಿಮ್ಮ ಹತ್ತಿರ ಪತ್ರ ತಂದಾಗ ನಮಗೆಷ್ಟು ಗೌರವ ಕೊಟ್ಟಿದ್ದಿರಿ ಅಂತ ಕೇಳಿಕೊಳ್ಳಿ. ನೀವು ಅವತ್ತು ಸರಿ ಇದ್ದಿದ್ದರೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ. ತಾಯಿಗೆ ಮೋಸ ಮಾಡಿದ್ರು ಅಂತ ಹೇಳ್ತಿರಲ್ಲಾ. ಚಲುವರಾಯಸ್ವಾಮಿ, ಬಾಲಕೃಷ್ಣ, ಜಮೀರ್ ಅವರನ್ನು ಎಲ್ಲಿಂದ ಕರೆದುಕೊಂಡು ಬಂದ್ರಿ ತಾವು
80 ಶಾಸಕರನ್ನ ಸರಿಯಾಗಿ ಇಟ್ಟುಕೊಳ್ಳಲು ನಿಮಗೆ ಆಗಲಿಲ್ಲ ಅಂತ ಕಾಂಗ್ರೆಸ್ಸಿಗರ ವಿರುದ್ಧ ಮುನಿರತ್ನ ಸಿಟ್ಟಾದ್ರು.
ಯಡಿಯೂರಪ್ಪ ಮಾತು ತಪ್ಪದ ಮುಖ್ಯಮಂತ್ರಿ, ಕೊಟ್ಟ ಮಾತನ್ನು ನಡೆಸಿಕೊಟ್ಟಿದ್ದಾರೆ. ಯಡಿಯೂರಪ್ಪರಿಂದ ಮಾತ್ರ ಬೆಂಗಳೂರು ಅಭಿವೃದ್ಧಿ ಸಾಧ್ಯ ಅಂತ ಮುನಿರತ್ನ ಹೊಗಳಿದ್ರು.