ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಡಿಕೆ, ಆರ್ ಆರ್ ನಗರ ಚುನಾವಣೆ ಮೂಲಕ ಜೆಡಿಎಸ್ ಪಕ್ಷದ ಸಮಾಧಿ ಅಂತ ನಮ್ಮ ಪಕ್ಷದ ಮುಖಂಡರ ಮನೆಯಲ್ಲಿ ಡಿಕೆಶಿ ಹೇಳಿದ್ದಾರೆ. ಇಷ್ಟು ದಿನ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಿದ್ದಾಗಿದೆ. ಈಗ ಡಿಕೆಶಿ ಯವರು ಅವರಿಗೆ ಕೈ ಜೋಡಿಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆರ್ ಆರ್ ನಗರದಲ್ಲಿ ನನ್ನ ಪಕ್ಷದ ಕೆಲ ಮುಖಂಡರನ್ನು ಸೆಳೆಯಲು ಪ್ರಯತ್ನ ಮಾಡ್ತಿದ್ದಾರೆ. ನನ್ನ ಪಕ್ಷದ ಮುಖಂಡರನ್ನು ಅವರು ಸೆಳೆಯುವುದಕ್ಕೆ ಸಾಧ್ಯವಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಈಗಿನ ಅಧ್ಯಕ್ಷರ ವಿರುದ್ಧವೇ ಹೋರಾಟ ಮಾಡಿದ್ದೇನೆ. ನಿರಂತರವಾಗಿ ನಾವು ಈಗಿನ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧವೇ ನಾವು ಹೋರಾಟ ಮಾಡಿಕೊಂಡು ಬಂದಿದ್ದೇನೆ ಎಂದರು. ಇದನ್ನೂ ಓದಿ: ಬೇಲ್ ಪಡೆಯಲ್ಲ, ಸ್ಟೇಷನ್ಗೆ ಹೋಗಲ್ಲ – ಕುಸುಮಾ ವಿರುದ್ಧದ ಎಫ್ಐಆರ್ಗೆ ಡಿಕೆಶಿ ಕಿಡಿ
ಒಬ್ಬ ಪಕ್ಷದ ಅಧ್ಯಕ್ಷರಾಗಿ ಬೇರೆ ಪಕ್ಷದದಲ್ಲಿರುವ ಒಂದು ಸಮಾಜದವರನ್ನು ಕರೆದುಕೊಂಡು ಹೋಗೋದು ಅವರ ಭ್ರಮೆ. ಮೊದಲು ಡಿಕೆಶಿ ಯವರು ಸಮಾಜಕ್ಕೆ ಕೊಡುಗೆ ಹಾಗೂ ಕಾಣಿಕೆ ಏನೆಂದು ಹೇಳಬೇಕು. ಅವರು ಕರೆದ ಕೂಡಲೇ ನಮ್ಮವರು ಅವರ ಹಿಂದೆ ಹೋಗೋಕೆ ಅವರೇನು ಕಿಂದರಿ ಜೋಗಿಗಳಾ…? ಅವರಿಂದ ನನಗೆ ಯಾವುದೇ ಆತಂಕ ಇಲ್ಲ. ಈ ಚುನಾವಣೆಯಲ್ಲಿ ಅವರಿಗೆ ಮತದಾರರ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.