ಹುಬ್ಬಳ್ಳಿ: ರಾಜ್ಯದಲ್ಲಿ ಡ್ರಗ್ಸ್-ಗಾಂಜಾ ನಶೆಯ ಚರ್ಚೆಗಳು ನಡೆಯುತ್ತಿದ್ದಾಗಲೇ, ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಸದ್ದಿಲ್ಲದೇ ಗಾಂಜಾ ಪ್ರಕರಣವೊಂದನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಮಾರುತಿ ಹರಣಶಿಕಾರಿ ಮತ್ತು ಚಂದಪ್ಪ ಹರಣಶಿಕಾರಿಯ ಎಂದು ಗುರುತಿಸಲಾಗಿದೆ. ಬಂಧಿತರಿಂದ 5 ಕೆಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾಣಿಜ್ಯನಗರಿಯಲ್ಲಿ ನಡೆಯುತ್ತಿರುವ ನಿರಂತರ ಗಾಂಜಾ ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ಜಾಲ ಬೀಸಿದ್ದ ಉಪನಗರ ಠಾಣೆಯ ಪೊಲೀಸರು, ಆರೋಪಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದರು. ಯಾವ ಯಾವ ಭಾಗದಿಂದ ನಗರಕ್ಕೆ ಗಾಂಜಾ ಬರುತ್ತದೆ, ಯಾರಿಗೆ ಮಾರಾಟ ಮಾಡುತ್ತಾರೆ. ಸ್ಥಳೀಯರು ಯಾರು ಖರೀದಿ ಮಾಡುತ್ತಾರೆಂಬ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಗಲೇ, ಗದಗ ಕಡೆಯಿಂದ ಗಾಂಜಾ ಬರುತ್ತಿರುವುದು ತಿಳಿದು ಬಂದಿತ್ತು.
ಉಪನಗರ ಠಾಣೆ ಇನ್ಸ್ ಪೆಕ್ಟರ್ ಹೊಳೆಣ್ಣನವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಉಮೇಶ ಹೆದ್ದೇರಿ, ಮಲ್ಲಿಕಾರ್ಜುನ ಧನಿಗೊಂಡ, ಸುನೀಲ ಪಾಂಡೆ, ಮಂಜು ಎಕ್ಕಡಿ, ರವಿ ಹೊಸಮನಿ, ರೇಣಪ್ಪ ಚಿಕ್ಕಲಿಗ್ಯಾರ, ಬಸವರಾಜ ಸುಣಗಾರ, ಕರಬಸಪ್ಪ ನೆಲಗುಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರ ಈ ಕಾರ್ಯದಿಂದ ನಗರದಲ್ಲಿ ನಡೆಯುತ್ತಿದ್ದ ಗಾಂಜಾ ದಂಧೆಯ ಮೂಲ ಸಿಗುವ ಸಾಧ್ಯತೆಯಿದ್ದು, ತನಿಖೆ ಮುಂದುವರೆದಿದೆ.