ಮಂಗಳೂರು: ಚೀನಾ ಸೈನಿಕರು ಈಗ ಭಾರತದ ಒಳಕ್ಕೆ ಬಂದು ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದಾರೆ. ಈಗ ಯಾಕೆ 56 ಇಂಚಿನ ಎದೆಗಾರಿಕೆಯವರು ಮೌನವಾಗಿದ್ದಾರೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಪ್ರಶ್ನೆ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಇದ್ದಾಗ ಮೌನಿ ಬಾಬಾ ಎನ್ನುತ್ತಿದ್ದವರು ಈಗೆಲ್ಲಿದ್ದಾರೆ. ಮನೆಗೆ ನುಗ್ಗಿ ಹೊಡೆಯುವುದಾಗಿ ಭಾಷಣ ಮಾಡಿದ್ದವರು ಮೌನವಾಗಿದ್ದು ಏಕೆ ಎಂದು ವ್ಯಂಗ್ಯವಾಡಿದ ಖಾದರ್, ಹೊಡೆಯಬೇಕಿತ್ತಲ್ವಾ.. ಯಾಕೆ ಸುಮ್ಮನೆ ಕುಳಿತಿದ್ದಾರೆ..? ಎಂದು ಪ್ರಶ್ನೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಡಳಿತ ಪಕ್ಷದವರು ಮರಳು ದಂಧೆ ನಡೆಸ್ತಿದ್ದಾರೆ. ಸಂಸದರು, ಆಡಳಿತ ಪಕ್ಷದ ಸದಸ್ಯರ ಮೂಗಿನಡಿ ದಂಧೆ ನಡೀತಿದೆ. ಮರಳು ದಂಧೆಯಿಂದಾಗಿ ಲೋಡ್ ಮರಳಿಗೆ 20 ಸಾವಿರ ಆಗಿದೆ. ಕಳೆದ ಬಾರಿ ಇದ್ದ ಸ್ಯಾಂಡ್ ಬಝಾರ್ ಸಿಸ್ಟಮನ್ನು ಮುಗಿಸಿದ್ದಾರೆ. ಸ್ಯಾಂಡ್ ಬಝಾರ್ ಇದ್ದಾಗ 8 ಸಾವಿರಕ್ಕೆ ಮರಳು ಸಿಗ್ತಾ ಇತ್ತು. ಈಗ ಯಾಕೆ ಅಕ್ರಮ ಮರಳನ್ನು ಎತ್ತಿ ನೇರವಾಗಿ ಮಾರುತ್ತಿದ್ದಾರೆ. ಬಿಜೆಪಿಯವರು ಮಂಗಳೂರನ್ನು ಬಳ್ಳಾರಿ ಮಾಡಲು ಹೊರಟಿದ್ದಾರೆ ಎಂದು ಇದೇ ವೇಳೆ ಖಾದರ್ ಆಪಾದಿಸಿದ್ದಾರೆ.