-ಮತ್ತೆ ಬಂಡಾಯ ಏಳಲ್ಲ
ರಾಯಚೂರು: ಎರಡು ಮೂರು ದಿನದಲ್ಲಿ ರಾಜ್ಯ ಸಂಪುಟ ವಿಸ್ತರಣೆಯಾಗಲಿದ್ದು, ಮೊದಲಿಗೆ ಗೆದ್ದ 11 ಶಾಸಕರಿಗೆ ಮಂತ್ರಿ ಸ್ಥಾನ ನೀಡಲಿದ್ದಾರೆ. ಹೈಕಮಾಂಡ್ ಸೂಚನೆ ಹಿನ್ನೆಲೆ ಸೋತವರಿಗೆ ಸದ್ಯಕ್ಕೆ ಸಚಿವ ಸ್ಥಾನ ಇಲ್ಲ ಅಂತ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.
ರಾಯಚೂರಿನ ಮಸ್ಕಿಯಲ್ಲಿ ಮಾತನಾಡಿದ ಪ್ರತಾಪ್ ಗೌಡ ಪಾಟೀಲ್, ಮಸ್ಕಿ ಹಾಗೂ ಆರ್ ಆರ್ ನಗರದ ಚುನಾವಣೆ ಬಳಿಕ ಇಬ್ಬರಿಗೂ ಸಚಿವ ಸ್ಥಾನ ನೀಡುತ್ತಾರೆ. ಎರಡು ಸಚಿವ ಸ್ಥಾನ ಹಾಗೆ ಉಳಿಸುವುದಾಗಿ ಬಿಎಸ್ ವೈ ಹೇಳಿದ್ದಾರೆ ಎಂದರು. ನಾವು 17 ಜನ ಒಟ್ಟಾಗಿಯೇ ಇದ್ದೇವೆ. ಆದರೆ ಒಂದು ಬಾರಿಯೂ ಸಭೆ ಮಾಡಿಲ್ಲ. ಸಚಿವ ಸ್ಥಾನ ಸಿಗದಿದ್ದರೆ ಬಂಡಾಯದ ಪ್ರಶ್ನೆಯೇ ಇಲ್ಲ. ಒಂದು ಪಕ್ಷ ಬಿಟ್ಟು ಬಂದವರು ಮತ್ತೆ ಬಂಡಾಯ ಏಳಲು ಸಾಧ್ಯವಿಲ್ಲ ಎಂದರು.
11 ಜನ ಗೆದ್ದ ಶಾಸಕರನ್ನ ಮಂತ್ರಿಗಳನ್ನಾಗಿ ಮಾಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನು ಈಡೇರಿಸುತ್ತಾರೆ ಅನ್ನೋ ವಿಶ್ವಾಸವಿದೆ. ಪಕ್ಷದಲ್ಲಿ ಶಿಸ್ತಿದೆ ಹೈಕಮಾಂಡ್ ಇದೆ. ಹೀಗಾಗಿ ಯಡಿಯೂರಪ್ಪನವರು ಸ್ವತಂತ್ರವಾಗಿ ಯಾವುದೇ ನಿರ್ಣಯ ತೆಗೆದುಕೊಳ್ಳಲು ಆಗಲ್ಲ. ಸಂಕ್ರಾಂತಿವರೆಗೆ ಶೂನ್ಯ ಮಾಸ ಇದ್ದಿದ್ದರಿಂದ ಸಂಪುಟ ವಿಸ್ತರಣೆ ಸಾಧ್ಯವಾಗಿರಲಿಲ್ಲ. ಈಗಲೂ ವಿಳಂಬವಾಗಿದೆ ಇನ್ನೂ ಎರಡು ಮೂರು ದಿನದಲ್ಲಿ ವಿಸ್ತರಣೆಯಾಗುವ ನಿರೀಕ್ಷೆ ಇದೆ ಅಂತ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.