ಹಕ್ಕು ಪತ್ರಗಳಿಗಾಗಿ ಹಗಲು, ರಾತ್ರಿ ಹೋರಾಟ – ಅರಣ್ಯದಲ್ಲೇ 10 ದಿನಗಳಿಂದ ಪ್ರತಿಭಟನೆ

Public TV
2 Min Read
rmg protest 2

ರಾಮನಗರ: 2006ರ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರಗಳಿಗಾಗಿ ಆಗ್ರಹಿಸಿ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಬುಡಗಯ್ಯನ ದೊಡ್ಡಿ ಗ್ರಾಮದ ಇರುಳಿಗ ಸಮುದಾಯದ ಆದಿವಾಸಿಗಳು ಕಳೆದ 10 ದಿನಗಳಿಂದ ಅರಣ್ಯದಲ್ಲೇ ಹಗಲು- ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಡಿಸೆಂಬರ್ 19ರಂದು 93 ಕುಟುಂಬಗಳಿಗೆ ಹಕ್ಕು ಪತ್ರಕ್ಕಾಗಿ ಆಗ್ರಹಿಸಿ ಆದಿವಾಸಿಗಳು ಪ್ರತಿಭಟನೆ ಶುರು ಮಾಡಿದರು. ಅಂದಿನಿಂದ ಇಲ್ಲಿಯ ತನಕ ಅರಣ್ಯದಲ್ಲೇ ಶೆಡ್‍ಗಳನ್ನು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವಾಗ ಹಕ್ಕುಪತ್ರಗಳನ್ನು ವಿತರಣೆ ಮಾಡುತ್ತೀರೋ ಆ ಕ್ಷಣ ಪ್ರತಿಭಟನೆ ಕೈ ಬಿಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

rmg protest 3

ಧರಣಿ ನಿರತ ಆದಿವಾಸಿಗಳ ಮನವೊಲಿಕೆಗೆ ಜಿಲ್ಲಾಡಳಿತದಿಂದ ಸಾಕಷ್ಟು ಪ್ರಯತ್ನ ನಡೆಸಿದರು ವಿಫಲವಾಗಿದೆ. ಪ್ರತಿಭಟನೆ ಸ್ಥಳಕ್ಕೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಉಪನಿರ್ದೇಶಕರು, ಸೇರಿದಂತೆ ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ, ಅರಣ್ಯ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಮತ್ತೆ ಸರ್ವೇ ಮಾಡಿ ವರದಿ ಬಂದ ಬಳಿಕ ಜಾಗಗಳನ್ನು ಗುರುತಿಸಿ ಹಕ್ಕು ಪತ್ರಗಳನ್ನು ನೀಡುವ ಭರವಸೆ ನೀಡಿದರೂ ಪ್ರತಿಭಟನಾ ನಿರತರು ಮಾತ್ರ ಹಕ್ಕು ಪತ್ರ ನೀಡುವವರೆಗೂ ಸ್ಥಳದಿಂದ ಹೊರಗೆ ಬರಲ್ಲ ಎಂದು ಅರಣ್ಯದಲ್ಲೇ ಕುಳಿತಿದ್ದಾರೆ.

rmg protest 1

ಅಧಿಕಾರಿಗಳ ಮನವೊಲಿಕೆಗೂ ಬಗ್ಗದ ಆದಿವಾಸಿಗಳು ಅರಣ್ಯದಲ್ಲೇ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಅರಣ್ಯದಲ್ಲೇ ಒಲೆಯೊಡ್ಡಿ ಅಡುಗೆ ಮಾಡಿ ಊಟ, ತಿಂಡಿ ಮಾಡ್ತಿದ್ದಾರೆ. ಅಲ್ಲದೇ ಎಲೆ, ತಟ್ಟೆ ಇಲ್ಲದಿದ್ದರೆ ಬಂಡೆಯ ಮೇಲೆಯೇ ನೀರು ಸುರಿದು ತೊಳೆದು ಊಟ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಟೆಂಟ್‍ಗಳನ್ನು ಹಾಕಿಕೊಂಡು ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿಯೇ ಹಗಲು – ರಾತ್ರಿ ನೂಕ್ತಿದ್ದಾರೆ. ಇನ್ನೂ ರಾತ್ರಿ ವೇಳೆ ಚಳಿ ಜೋರಾಗಿದ್ದು ಪ್ರತಿಭಟನಾಕಾರರು ಚಳಿಗೂ ಕೂಡ ಬೆದರದೆ ಅರಣ್ಯದಲ್ಲೇ ಠಿಕಾಣಿ ಹೂಡಿದ್ದಾರೆ.

ಸುಮಾರು 65 ಶೆಡ್ ನಿರ್ಮಾಣ ಮಾಡಿ ಇರುಳಿಗ ಜನಾಂಗ ತಮ್ಮ ಮೂಲ ಸ್ಥಳದಲ್ಲಿಯೇ ವಾಸವಿದ್ದೇವೆ. ಅರಣ್ಯ ಹಕ್ಕು ಕಾಯ್ದೆ 3(1)ಎಂ ಪ್ರಕಾರ ಅರಣ್ಯ ಭೂಮಿಯ ಹಕ್ಕು ಪತ್ರ ನೀಡುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಪದೇಪದೇ ಜಿಲ್ಲಾಡಳಿತ ಆದಿವಾಸಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ಈ ಬಾರಿ ಹಕ್ಕು ಪತ್ರ ಕೊಟ್ಟರೆ ಮಾತ್ರವೇ ಪ್ರತಿಭಟನೆ ಕೈ ಬಿಡುವುದು ಎಂದು ಕುಳಿತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *