ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆಗೆ ಪ್ರಮುಖ ಪಾತ್ರವಹಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಉಪಕಾರ ತೀರಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ.
ಮೈತ್ರಿ ಸರ್ಕಾರದಿಂದ ವಿರುದ್ಧ ಅಸಮಾಧಾನ ಹೊರಹಾಕಿ ರಾಜೀನಾಮೆ ನೀಡಿದ್ದ ಅನರ್ಹ ಶಾಸಕರಿಗೆ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಮುಂಬೈನಲ್ಲಿ ಆಶ್ರಯ ಕೊಟ್ಟಿದ್ದರು. ಅಷ್ಟೇ ಅಲ್ಲದೆ ಅವರಿದ್ದ ಹೋಟೆಲ್ಗೆ ಭದ್ರತೆ ಒದಗಿಸಿದ್ದರು. ಈ ಮೂಲಕ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರಲು ಫಡ್ನವೀಸ್ ಕೂಡ ಶ್ರಮಿಸಿದ್ದರು. ಈ ಋಣವನ್ನು ತೀರಿಸಲು ಸಿಎಂ ಯಡಿಯೂರಪ್ಪ, ಲಿಂಗಾಯತ ಮತದಾರರ ಪ್ರಾಬಲ್ಯವಿರುವ ಮಹಾರಾಷ್ಟ್ರದ 13 ಜಿಲ್ಲೆಗಳಲ್ಲಿ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಚುನಾವಣೆಗೂ ಮುನ್ನ ‘ಮಹಾ’ ಸಿಎಂಗೆ ಭಾರೀ ಹಿನ್ನಡೆ – ತನಿಖೆಗೆ ಸುಪ್ರೀಂ ಸಮ್ಮತಿ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಬುಲಾವ್ ಕೊಟ್ಟಿದೆ. ಮಹಾರಾಷ್ಟದಲ್ಲಿ ಯಾವ ದಿನದಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು ಎಂದು ಸೂಚನೆ ಕೂಡ ಸಿಎಂ ಯಡಿಯೂರಪ್ಪ ಅವರಿಗೆ ಸಿಕ್ಕಿದೆ ಎಂದು ಕೇಳಿ ಬಂದಿದೆ.
ಬಿ.ಎಸ್.ಯಡಿಯೂರಪ್ಪ ಅವರ ಪ್ರಚಾರಕ್ಕೆ ಅಕ್ಟೋಬರ್ 15 ಮತ್ತು 16ರಂದು ಮುಹೂರ್ತ ಫಿಕ್ಸ್ ಆಗಿದೆ. ಮಹಾರಾಷ್ಟ್ರದ 13 ಜಿಲ್ಲೆಯಲ್ಲಿ ಲಿಂಗಾಯತ ಪ್ರಾಬಲ್ಯವಿದೆ. ಈ ಜಿಲ್ಲೆಗಳ ಒಟ್ಟು ಮತದಾರರ ಪೈಕಿ ಸುಮಾರು 1.20 ಕೋಟಿ ಜನ ಲಿಂಗಾಯತ ಮತರೇ ಇದ್ದಾರೆ. ಹೀಗಾಗಿ ಲಿಂಗಾಯತ ಧರ್ಮದ ನಾಯಕ, ಸಿಎಂ ಯಡಿಯೂರಪ್ಪ ಅವರು ಈ ಜಿಲ್ಲೆಗಳಲ್ಲಿ ಎರಡು ದಿನ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಅಕ್ಟೋಬರ್ 21ರಂದು ಮತದಾನವು ನಡೆಯಲಿದೆ. ಚುನಾವಣಾ ಫಲಿತಾಂಶವು ಅಕ್ಟೋಬರ್ 23ರಂದು ಹೊರ ಬೀಳಲಿದೆ.