-ಬಿಜೆಪಿಗೆ ಹೊಸ ತಲೆನೋವು ಆರಂಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಗೋಪಾಲಯ್ಯ ವಿಪ್ ಉಲ್ಲಂಘಿಸಿ ಮತ ಹಾಕದೇ ಉಳಿದಿದಕ್ಕೆ ಬಿಜೆಪಿ ಬಳಿ ದುಬಾರಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನನ್ನ ಪತ್ನಿಯನ್ನ ಮುಂದಿನ ಮೇಯರ್ ಮಾಡಿ ಎಂದು ಬಾರಿ ಬೇಡಿಕೆಯನ್ನ ಗೋಪಾಲಯ್ಯ ಇಟ್ಟಿದ್ದಾರೆ. ಸದ್ಯ ಬಿಬಿಎಂಪಿಯಲ್ಲಿ ಹೇಮಲತಾ ಗೋಪಾಲಯ್ಯರಿಗೆ ಮೇಯರ್ ಪಟ್ಟ ಎಂಬ ವಿಚಾರ ಬಾರಿ ಸದ್ದು ಮಾಡುತ್ತಿದೆ. ಅನರ್ಹ ಶಾಸಕ ಗೋಪಾಲಯ್ಯ ಪತ್ನಿಗಾಗಿ ಕಾದಾಟ ಶುರು ಮಾಡಿದ್ದಾರೆ. ಬಿಜೆಪಿ ಲೀಡರ್ಗಳಿಗೆ ಈ ಮಹಾ ಬೇಡಿಕೆ ಕೇಳಿ ತಲೆಬಿಸಿಯಾಗಿದೆ ಎಂಬ ಮಾಹಿತಿಯೂ ಇದೆ.
ಜೆಡಿಎಸ್ ಕಾರ್ಪೋರೇಟರ್ ಹೇಮಲತಾ ಗೋಪಾಲಯ್ಯ ಮೇಯರ್ ಆಗ್ತಾರೆ ಎಂಬ ವಿಚಾರ ಬಿಜೆಪಿಗೆ ತಲೆಕೆಡಿಸಿದೆ. ಇತ್ತ ಬಿಜೆಪಿಗೆ ಸದ್ಯ ಪಾಲಿಕೆಯಲ್ಲಿ ಹೆಚ್ಚು ಸಂಖ್ಯಾಬಲವಿದ್ರು ಅಧಿಕಾರ ಸಿಗದೇ ದೂರ ಉಳಿಯಬೇಕಾಗುತ್ತದೆ. ಇತ್ತ ಬಿಜೆಪಿ ಅವಧಿಯಲ್ಲಿ ಹೇಮಲತಾರಿಗೆ ಮೇಯರ್ ಪಟ್ಟ ಎಂಬ ಗೋಪಾಲಯ್ಯರ ದುಬಾರಿ ಡಿಮ್ಯಾಂಡ್ಗೆ ಬಿಜೆಪಿ ಕಾರ್ಪೋರೇಟರ್ಸ್, ಶಾಸಕರು ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಬಿಜೆಪಿ ನಾಯಕರ ಜೊತೆ ಮಾತನಾಡಿರುವ ಗೋಪಾಲಯ್ಯ, ನನಗೆ ಸಚಿವ ಸ್ಥಾನ ಬೇಡ. ನನ್ನ ಪತ್ನಿ ಮೇಯರ್ ಮಾಡಿ ಎಂಬ ಡಿಮ್ಯಾಂಡ್ ಇಟ್ಟಿದ್ದಾರೆ. ಗೋಪಾಲಯ್ಯ ರಾಜೀನಾಮೆ ನೀಡಿ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿರುವ ಪ್ರತಿಯಾಗಿ ದುಬಾರಿ ಉಡುಗೊರೆಯನ್ನೇ ನಿರೀಕ್ಷೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ 4 ವರ್ಷದಲ್ಲಿ ಗೋಪಾಲಯ್ಯ ಪತ್ನಿಗೆ ಒಲಿದಿರೊ ಅಧಿಕಾರಗಳು ಹೀಗಿದೆ. ಉಪಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೀಗೆ ಅನುದಾನ ಎಲ್ಲವೂ ಹೇಮಲತಾ ಗೋಪಾಲಯ್ಯರಿಗೆ ಸಿಕ್ಕಿದೆ. ಹಲವು ಅಧಿಕಾರ ಅನುಭವಿಸಿರೊ ಹೇಮಲತಾ ಗೋಪಾಲಯ್ಯ, ಮೇಯರ್ ಗದ್ದುಗೆ ಏರಲು ನಿಂತಿದ್ದು ಬಿಜೆಪಿ ಕಾರ್ಪೋರೇಟರ್ ಗಳನ್ನು ತಬ್ಬಿಬ್ಬು ಮಾಡಿದೆ. ಸಂಖ್ಯಾಬಲವಿದ್ರು, ಅಧಿಕಾರ ಮಾತ್ರ ಇಲ್ಲ. ಬಿಜೆಪಿ ಕಾರ್ಪೋರೇಟರ್ಸ್ ಗೆ ಅನರ್ಹ ಶಾಸಕ ಗೋಪಾಲಯ್ಯ ಡಿಮ್ಯಾಂಡ್ದೇ ಚಿಂತೆಯಾಗಿದೆ. ಇತ್ತ ಸೆಪ್ಟೆಂಬರ್ 28ಕ್ಕೆ ಗಂಗಾಬಿಕೆ ಅವರ ಮೇಯರ್ ಅವಧಿ ಮುಕ್ತಾಯ ಆಗಲಿದೆ.